ಆಪರೇಷನ್ ಥಿಯೇಟರ್ ಗೆ ನುಗ್ಗಿ ನವಜಾತ ಶಿಶುವನ್ನು ಕಚ್ಚಿ ಕೊಂದ ಬೀದಿನಾಯಿ!
ಉತ್ತರ ಪ್ರದೇಶದ ವೈದ್ಯಕೀಯ ದುರವಸ್ಥೆ
ಆಗ್ರಾ : ಉತ್ತರ ಪ್ರದೇಶದ ಫಾರುಕಾಬಾದ್ ಎಂಬಲ್ಲಿನ ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಗೆ ನುಗ್ಗಿದ ಬೀದಿನಾಯಿಯೊಂದು ನವಜಾತ ಶಿಶುವೊಂದನ್ನು ಕಚ್ಚಿ ಎಳೆದಾಡಿ ಕೊಂದ ಘಟನೆ ನಡೆದಿದೆ.
ರವಿಕುಮಾರ್ ಎಂಬವರು ತಮ್ಮ ಪತ್ನಿ ಕಾಂಚನ್ ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಆಕಾಶ್ ಗಂಗಾ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಸಿಸೇರಿಯನ್ ಅಗತ್ಯವೆಂದು ಹೇಳಿದ ನಂತರ ಆಕೆಯನ್ನು ಆಪರೇಷನ್ ಥಿಯೇಟರ್ಗೆ ಕೊಂಡು ಹೋಗಲಾಗಿತ್ತು. ಸುಮಾರು ಒಂದು ಗಂಟೆಯ ನಂತರ ಅಲ್ಲಿನ ಸಿಬ್ಬಂದಿ ಹೊರಗೆ ಕಾದು ಕುಳಿತಿದ್ದ ರವಿಕುಮಾರ್ ಗೆ ಮಾಹಿತಿ ನೀಡಿ ಶಸ್ತ್ರಕ್ರಿಯೆ ಯಶಸ್ವಿಯಾಗಿದೆಯೆಂದು ಹೇಳಿದ್ದರಲ್ಲದೆ ಗಂಡು ಮಗು ಹುಟ್ಟಿದೆ ಎಂಬ ಮಾಹಿತಿ ನೀಡಿದ್ದರು. ನಂತರ ತಾಯಿಯನ್ನು ವಾರ್ಡ್ ಗೆ ಸ್ಥಳಾಂತರಿಸಿದರೂ ಶಿಶುವನ್ನು ಆಪರೇಷನ್ ಥಿಯೇಟರ್ ನಲ್ಲಿಯೇ ಇರಿಸಲಾಗಿತ್ತು. ಈ ಸಂದರ್ಭ ಒಳನುಗ್ಗಿದ ಬೀದಿ ನಾಯಿಯೊಂದು ಶಿಶುವನ್ನು ಕಚ್ಚಿ ಕೊಂದಿತ್ತು.
ಈ ಕುರಿತು ರವಿಕುಮಾರ್ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡಾಗ ಸುಮ್ಮನಿರುವಂತೆ ಹೇಳಲಾಯಿತಲ್ಲದೆ ಅವರಿಗೆ ಸ್ವಲ್ಪ ಹಣ ನೀಡಿ ಅವರ ಬಾಯಿ ಮುಚ್ಚಿಸುವ ಯತ್ನವೂ ನಡೆದಿತ್ತು ಎಂದು ಆರೋಪಿಸಲಾಗಿದೆ. ಮಗು ಹುಟ್ಟುವಾಗಲೇ ಮೃತಪಟ್ಟಿತ್ತು ಎಂಬ ಸಬೂಬು ಕೂಡ ಅವರಿಗೆ ನೀಡಲಾಗಿತ್ತು. ಆಸ್ಪತೆಯ ನಿರ್ಲಕ್ಷ್ಯದಿಂದ ನಾಯಿ ಆಪರೇಷನ್ ಥಿಯೇಟರ್ ಪ್ರವೇಶಿಸಿ ಮಗುವನ್ನು ಕೊಂದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನ್ವೇಂದ್ರ ಸಿಂಗ್ ತಿಳಿಸಿದ್ದಾರೆ.
ಸೂಕ್ತ ದಾಖಲೆಗಳಿಲ್ಲದ್ದಕ್ಕಾಗಿ ಆಸ್ಪತ್ರೆಯನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.