ಕಾಲಿಂದಿ ಕುಂಜ್-ಶಹೀನ್ಬಾಗ್ ರಸ್ತೆ ಸಂಚಾರ ನಿರ್ಬಂಧ ತೆರವಿಗೆ ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ಸೂಚನೆ
ಹೊಸದಿಲ್ಲಿ, ಜ. 14: ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲತೆಗೆ ಕಾರಣವಾಗಿರುವ ಕಾಲಿಂದಿ ಕುಂಜ್ ರಸ್ತೆ ಬಂದ್ ಹಾಗೂ ಸಂಚಾರ ನಿರ್ಬಂಧದ ಬಗ್ಗೆ ಪರಿಶೀಲಿಸುಲು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಸಂಚಾರ ಪೊಲೀಸ್ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಶಹೀನ್ಭಾಗ್ನಲ್ಲಿ ಪ್ರತಿಭಟನಾಕಾರರು ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ತಡೆ ಉಂಟಾಗಿದ್ದು, ಪ್ರಯಾಣಿಕರು ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ಒತ್ತಾಯಿಸಲಾಗಿದೆ. ಸಾರ್ವಜನಿಕ ಹಿತಾಸಕಿ ಗಮನದಲ್ಲಿ ಇರಿಸಿಕೊಂಡು ಸಮಯ ಮಿತಿ ಒಳಗಡೆ ಸ್ಥಳೀಯರ ಸಂಕಷ್ಟಗಳನ್ನು ಪರಿಶೀಲಿಸಿ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಸಿ. ಹರಿ ಶಂಕರ್ ಅವರನ್ನು ಒಳಗೊಂಡ ಪೀಠ ಪೊಲೀಸರಿಗೆ ಸೂಚಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ 2019 ಡಿಸೆಂಬರ್ 15ರಂದು ಕಾಲಿಂದಿ ಕುಂಜ್-ಶಹೀನಾಭಾಗ್ ರಸ್ತೆ ಹಾಗೂ ಓಕ್ಲಾ ಅಂಡರ್ಪಾಸ್ ಅನ್ನು ಮುಚ್ಚಿರುವುದನ್ನು ಹಿಂಪಡೆಯುವಂತೆ ದಿಲ್ಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಮಿತ್ ಶಹಾನಿ ಸಲ್ಲಿಸಿದ ಮನವಿ ಪೀಠ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ನಡೆಸಿತು.