ಶಾಂಘೈ ಸಹಕಾರಿ ಒಕ್ಕೂಟದ ಶೃಂಗಸಭೆಗೆ ಇಮ್ರಾನ್ ಖಾನ್ ಆಹ್ವಾನಿಸಲು ನಿರ್ಧರಿಸಿದ ಭಾರತ
ಹೊಸದಿಲ್ಲಿ: ಈ ವರ್ಷ ಭಾರತ ಆಯೋಜಿಸಲಿರುವ ಶಾಂಘೈ ಸಹಕಾರ ಒಕ್ಕೂಟದ (ಎಸ್ಸಿಒ) ದೇಶಗಳ ಸರಕಾರಗಳ ಮುಖ್ಯಸ್ಥರ ಶೃಂಗಸಭೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಭಾರತಕ್ಕೆ ಆಹ್ವಾನಿಸಲಾಗುವುದು ಎಂದು ಸರಕಾರ ತಿಳಿಸಿದೆ. ಎಲ್ಲಾ ಎಂಟು ಸದಸ್ಯ ರಾಷ್ಟ್ರಗಳ ಹಾಗೂ ಎಸ್ಸಿಒ ಸಂಘಟನೆಯ ನಾಲ್ಕು ವೀಕ್ಷಕ ರಾಷ್ಟ್ರಗಳ ಸದಸ್ಯರನ್ನೂ ಈ ಪ್ರಾದೇಶಿಕ ಶೃಂಗಸಭೆಗೆ ಆಹ್ವಾನಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ವಿಚಾರವನ್ನು ಚೀನಾದ ಮುಖಾಂತರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಎತ್ತಲು ಪಾಕಿಸ್ತಾನ ಮೂರನೇ ಬಾರಿ ವಿಫಲ ಯತ್ನ ನಡೆಸಿದ ಕೆಲವೇ ಗಂಟೆಗಳಲ್ಲಿ ಸರಕಾರ ಇಮ್ರಾನ್ ಖಾನ್ ಅವರನ್ನು ಆಹ್ವಾನಿಸುವ ನಿರ್ಧಾರ ಕೈಗೊಂಡಿದೆ.
ಕಳೆದ ವರ್ಷ ಕಿರ್ಘಿಸ್ತಾನ್ ರಾಜಧಾನಿ ಬಿಷ್ಕೆಕ್ನಲ್ಲಿ ನಡೆದ ಎಸ್ಸಿಒ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಿದ್ದರು.
Next Story