ನಿರ್ಭಯಾ ಪ್ರಕರಣ: ಗಲ್ಲುಶಿಕ್ಷೆ ಜಾರಿಯ ಕುರಿತು ಸ್ಥಿತಿಗತಿ ವರದಿ ಸಲ್ಲಿಸಲು ತಿಹಾರ ಜೈಲಿಗೆ ಕೋರ್ಟ್ ನಿರ್ದೇಶ
ಹೊಸದಿಲ್ಲಿ,ಜ.16: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಗಳಿಗೆ ನಿಗದಿತ ಗಲ್ಲುಶಿಕ್ಷೆ ಜಾರಿ ಕುರಿತು ಸೂಕ್ತ ಸ್ಥಿತಿಗತಿ ವರದಿಯನ್ನು ಶುಕ್ರವಾರ ತನಗೆ ಸಲ್ಲಿಸುವಂತೆ ದಿಲ್ಲಿಯ ಸೆಷನ್ಸ್ ನ್ಯಾಯಾಲಯವು ಗುರುವಾರ ತಿಹಾರ ಜೈಲು ಅಧಿಕಾರಿಗಳಿಗೆ ಆದೇಶಿಸಿದೆ.
ಪರಿಹಾರಕ ಕ್ರಮಗಳು ಬಾಕಿಯಿರುವ ಹಿನ್ನೆಲೆಯಲ್ಲಿ ನಿಗದಿತ ಗಲ್ಲುಶಿಕ್ಷೆ ಜಾರಿ ಕುರಿತು ತಾವು ದಿಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಜೈಲು ಅಧಿಕಾರಿಗಳು ತಿಳಿಸಿದ ಬಳಿಕ ನ್ಯಾ.ಸತೀಶ ಕುಮಾರ ಅರೋರಾ ಅವರು ಈ ಆದೇಶವನ್ನು ಹೊರಡಿಸಿದರು.
ತನ್ನ ಕ್ಷಮಾಯಾಚನೆ ಅರ್ಜಿಯು ರಾಷ್ಟ್ರಪತಿಗಳ ಬಳಿ ಬಾಕಿಯಿರುವುದರಿಂದ ತನ್ನನ್ನು ಗಲ್ಲಿಗೇರಿಸುವ ದಿನಾಂಕವನ್ನು ಮುಂದೂಡುವಂತೆ ಕೋರಿ ದೋಷಿಗಳ ಪೈಕಿ ಮುಕೇಶ ಕುಮಾರ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ದೋಷಿಗಳ ವಿರುದ್ಧ ಡೆತ್ ವಾರಂಟ್ ಹೊರಡಿಸಿದ ನಂತರ ಬೆಳವಣಿಗೆಗಳಿಂದಾಗಿ ಅದನ್ನು ತಡೆಹಿಡಿಯುವುದು ಅಗತ್ಯವಾಗಿದೆ ಎಂದು ಮುಕೇಶ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.