ಸಿಎಎ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಪಂಜಾಬ್ ಸರಕಾರ
ಹೊಸದಿಲ್ಲಿ, ಜ.17: ವಿವಾದಾತ್ಮಕ ಪೌರತ್ವ(ತಿದ್ದುಪಡಿ)ಕಾಯ್ದೆ ವಿರುದ್ಧ ಪಂಜಾಬ್ ವಿಧಾನಸಭೆಯಲ್ಲಿ ಶುಕ್ರವಾರ ನಿರ್ಣಯವೊಂದನ್ನು ಅಂಗೀಕರಿಸಲಾಯಿತು. ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್)ಕೆಲವು ಭಾಗಗಳಲ್ಲಿ ಆತಂಕಗಳನ್ನು ನಿವಾರಿಸಲು ಎನ್ಪಿಆರ್ಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಚಿಂತಿಸುತ್ತಿದೆ.
ಎರಡು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾದ ಶುಕ್ರವಾರ ರಾಜ್ಯ ಸಚಿವ ಬ್ರಾಹ್ಮ್ ಮಹಿಂದ್ರ ನಿರ್ಣಯವನ್ನು ಮಂಡಿಸಿದರು. ಸಂಸತ್ತಿನಲ್ಲಿ ಮಂಡನೆಯಾಗಿರುವ ಸಿಎಎ ಕುರಿತು ದೇಶದಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಸಾಮಾಜಿಕ ಅಶಾಂತಿ ನೆಲೆಸಿದೆ. ಈ ಕಾಯ್ದೆಯ ವಿರುದ್ಧ ಪಂಜಾಬ್ನಲ್ಲೂ ಪ್ರತಿಭಟನೆ ನಡೆದಿದೆ ಎಂದು ಮಹಿಂದ್ರ ಹೇಳಿದ್ದಾರೆ.
ಜನಗಣತಿ 2020 ಹಾಗೂ ಎನ್ಪಿಆರ್ ವಿಧಾನಗಳ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವಾಲಯ ಹೊಸದಿಲ್ಲಿಯಲ್ಲಿ ಸಭೆ ಕರೆದ ದಿನವೇ ಪಂಜಾಬ್ನಲ್ಲಿ ನಿರ್ಣಯ ಅಂಗೀಕಾರವಾಗಿದೆ. ಈ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಜನಗಣತಿಯ ನಿರ್ದೇಶಕರು ಭಾಗವಹಿಸಬೇಕಾಗಿದೆ.