ನಿರ್ಭಯಾ ಸಾವಿನಲ್ಲಿ ರಾಜಕೀಯ ನಡೆಸುತ್ತಿರುವ ಬಿಜೆಪಿ-ಆಪ್: ತಾಯಿಯ ಆಕ್ರೋಶ
ಹೊಸದಿಲ್ಲಿ: ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ರಾಜಕೀಯದಾಟದಲ್ಲಿ ಜನವರಿ 22ರಂದು ನಡೆಯಬೇಕಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ಉದ್ದೇಶಪೂರ್ವಕವಾಗಿ ಮುಂದೂಡಲ್ಪಟ್ಟಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಆರೋಪಿಸಿದ್ದಾರೆ.
"ಘಟನೆ ನಡೆದ ಏಳು ವರ್ಷಗಳಾಗಿವೆ ಹಾಗೂ ನಮಗೆ ನ್ಯಾಯ ದೊರಕಿಲ್ಲ. ಸರಕಾರಕ್ಕೆ ನಮ್ಮ ನೋವು ಕಾಣಿಸುತ್ತಿಲ್ಲ. ಆಕೆಯ ಸಾವಿನಲ್ಲಿ ಎರಡೂ ಪಕ್ಷಗಳು ರಾಜಕೀಯ ನಡೆಸುತ್ತಿವೆ'' ಎಂದು ಎಎಪಿ ಹಾಗೂ ಬಿಜೆಪಿ ನಡುವೆ ಈ ವಿಚಾರದಲ್ಲಿ ನಡೆಯುತ್ತಿರುವ ವ್ಯಾಗ್ಯುದ್ಧದ ಕುರಿತಂತೆ ಅವರು ಪ್ರತಿಕ್ರಿಯಿಸಿದರು.
"ಇಲ್ಲಿಯ ತನಕ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ, ಆದರೆ 2012ರಲ್ಲಿ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಅದೇ ಜನರು ಇಂದು ತಮ್ಮ ರಾಜಕೀಯ ಲಾಭಕ್ಕಾಗಿ ನನ್ನ ಪುತ್ರಿಯ ಸಾವಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ'' ಎಂದು ಆಕೆ ಆಕ್ರೋಶದಿಂದ ನುಡಿದಿದ್ದಾರೆ.
ನಿರ್ಭಯಾ ಪ್ರಕರಣ ಆರೋಪಿಗಳ ಗಲ್ಲು ಶಿಕ್ಷೆ ವಿಳಂಬಕ್ಕೆ ಗುರುವಾರ ಬಿಜೆಪಿಯು ದಿಲ್ಲಿಯ ಎಎಪಿ ಸರಕಾರವನ್ನು ದೂರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಮನೀಶ್ ಸಿಸೋಡಿಯಾ ``ನಮಗೆ ದಿಲ್ಲಿ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ಜವಾಬ್ದಾರಿಯನ್ನು ಎರಡು ದಿನ ನೀಡಿ ನಾವು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುತ್ತೆವೆ'' ಎಂದಿದ್ದರು.