ಶಾ-ಮೋದಿ ಸಂಘರ್ಷಕ್ಕೆ ಇಡೀ ದೇಶ ಬೆಲೆ ತೆರುತ್ತಿದೆ: ಭೂಪೇಶ್ ಬಘೇಲ್
ರಾಯ್ಪುರ, ಜ.18: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮಧ್ಯೆ ಸಂಘರ್ಷ ಕಂಡುಬಂದಿದ್ದು, ಇದರಿಂದ ರಾಷ್ಟ್ರದ ಜನತೆ ಬೆಲೆ ತೆರುವಂತಾಗಿದೆ ಎಂದು ಛತ್ತೀಸ್ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಆರೋಪಿಸಿದ್ದಾರೆ.
‘‘ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗೂ ನಾಗರಿಕರ ರಾಷ್ಟ್ರೀಯ ನೋಂದಣಿ ಕಾಲಾನುಕ್ರಮದ ಭಾಗವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಮತ್ತೊಂದೆಡೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಗರಿಕರ ರಾಷ್ಟ್ರೀಯ ನೋಂದಣಿ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ,ಯಾರು ಸುಳ್ಳುಗಾರರು? ಎಂದು ಗೊತ್ತಾಗುತ್ತಿಲ್ಲ. ಈ ಇಬ್ಬರು ನಾಯಕರ ನಡುವೆ ಸಂಷರ್ಷ ಇರುವಂತೆ ಕಂಡಬರುತ್ತಿದೆ. ಈ ಇಬ್ಬರ ಸಂಘರ್ಷದಿಂದ ದೇಶ ಕಂಗಾಲಾಗಿದೆ ಎಂದು ಬಘೇಲ್ ಹೇಳಿದ್ದಾರೆ.
ಕೇಂದ್ರ ಸರಕಾರವು ಧರ್ಮದ ಮೂಲಕ ಜನತೆಯನ್ನು ‘ವಿಭಜಿಸಲು’ ಯತ್ನಿಸುತ್ತಿದೆ. ಬಿಜೆಪಿಯ ಮೊದಲ ಐದು ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ನೋಟು ಅಮಾನ್ಯ ಹಾಗೂ ಸರಕು ಹಾಗೂ ಸೇವಾ ತೆರಿಗೆಯನ್ನು ಜಾರಿಗೆ ತಂದರು. ಕಳೆದ ಏಳೆಂಟು ತಿಂಗಳುಗಳಿಂದ ಅಮಿತ್ ಶಾ ಎಲ್ಲ ನಿರ್ಧಾರನ್ನು ತೆಗೆದುಕೊಳ್ಳುತ್ತಿದ್ದಾರೆ. ಅಮಿತ್ ಶಾ ಅವರು ವಿಧಿ 370ನ್ನು ರದ್ದುಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ತಂದರು. ಇದೀಗ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಜಾರಿಗೆ ಯೋಜನೆ ರೂಪಿಸುತ್ತಿದ್ದಾರೆ. ಬಡವರು ತಮ್ಮ ಪೌರತ್ವದ ಸಾಬೀತಿಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಹೇಗೆ ನೀಡುತ್ತಾರೆನ್ನುವುದು ನನಗೆ ಅಚ್ಚರಿಯ ವಿಚಾರವಾಗಿದೆ ಎಂದು ಬಘೇಲ್ ಹೇಳಿದ್ದಾರೆ.