ಅತ್ಯಾಚಾರ ಆರೋಪಿಗಳನ್ನು ಕ್ಷಮಿಸಿಬಿಡಿ ಎನ್ನಲು ಇಂದಿರಾ ಜೈ ಸಿಂಗ್ ಯಾರು?
ನಿರ್ಭಯಾ ತಾಯಿ ಆಶಾದೇವಿ ಆಕ್ರೋಶ
ಹೊಸದಿಲ್ಲಿ, ಜ.18: ಅತ್ಯಾಚಾರ ಆರೋಪಿಗಳನ್ನು ಕ್ಷಮಿಸಿಬಿಡಿ ಎಂದು ತನಗೆ ಸಲಹೆ ನೀಡಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧ 2012ರ ದಿಲ್ಲಿ ಗ್ಯಾಂಗ್ರೇಪ್ ಸಂತ್ರಸ್ತೆಯ ತಾಯಿ ಆಶಾ ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಎಎನ್ಐಯೊಂದಿಗೆ ಮಾತನಾಡಿದ ಆಶಾದೇವಿ,‘‘ಇಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್ ಯಾರು? ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಇಡೀ ದೇಶ ಬಯಸುತ್ತಿದೆ. ಇಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್ಗೆ ಹೇಗೆ ಧೈರ್ಯ ಬಂತೊ ಗೊತ್ತಿಲ್ಲ. ನಾನು ಸುಪ್ರೀಂಕೋರ್ಟ್ನಲ್ಲಿ ಕಳೆದ ಕೆಲವು ವರ್ಷಗಳಿಂದ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಅವರು ಒಂದು ಬಾರಿಯೂ ನನ್ನ ಯೋಗಕ್ಷೇಮ ವಿಚಾರಿಸಿಲ್ಲ. ಇಂದು ಅವರು ಅಪರಾಧಿಗಳ ಪರ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಅತ್ಯಾಚಾರಿಗಳಿಗೆ ಬೆಂಬಲ ನೀಡುತ್ತಾ ಜೀವನ ಸಾಗಿಸಿದರೆ, ಅತ್ಯಾಚಾರ ಘಟನೆಗಳು ನಿಲ್ಲುವುದಿಲ್ಲ’’ ಎಂದರು.
ನಿನ್ನೆ ಟ್ವೀಟ್ ಮಾಡಿದ ಇಂದಿರಾ ಜೈಸಿಂಗ್, ‘‘ಆಶಾದೇವಿ ಅವರ ನೋವನ್ನು ನಾನು ಸಂಪೂರ್ಣ ಅರ್ಥಮಾಡಿಕೊಳ್ಳಬಲ್ಲೆ. ಅತ್ಯಾಚಾರದ ಅಪರಾಧಿಗಳನ್ನು ಕ್ಷಮಿಸುವ ಮೂಲಕ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಮಾದರಿಯನ್ನು ಅನುಸರಿಸುವಂತೆ ನಾನು ಆಶಾದೇವಿ ಬಳಿ ವಿನಂತಿಸಿಕೊಳ್ಳುವೆ’’ಎಂದು ಬರೆದಿದ್ದರು.
ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ಗಾಂಧಿ ಹಂತಕರ ಪೈಕಿ ಒಬ್ಬಳಾಗಿರುವ ನಳಿನಿಗೆ ಕ್ಷಮಾದಾನ ನೀಡಿದ್ದರು. ನಳಿನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.