ರಾಹುಲ್ ಗಾಂಧಿ ಕುರಿತ ಹೇಳಿಕೆ: ಸ್ಪಷ್ಟನೆ ನೀಡಿದ ರಾಮಚಂದ್ರ ಗುಹಾ
ಹೊಸದಿಲ್ಲಿ, ಜ.19: ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿಯ ಉಪಸ್ಥಿತಿ ಬಿಜೆಪಿಗೆ ನೆರವಾಗುತ್ತಿದೆ ಎಂಬ ತನ್ನ ಹೇಳಿಕೆಯ ಬಳಿಕ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಪ್ರಯತ್ನಿಸಿರುವ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ, ಸರಣಿ ಟ್ವೀಟ್ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.
‘ಮೋದಿ, ಹಿಂದುತ್ವ ಮತ್ತು ಭಾರತ’ದ ಸ್ಥೂಲ ಅರ್ಥದಲ್ಲಿ ತಾನು ಈ ಹೇಳಿಕೆ ನೀಡಿದ್ದೇನೆ. ವಯನಾಡ್ನಿಂದ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿರುವುದಕ್ಕೆ ಮಲಯಾಳಿಗಳನ್ನು ಆಕ್ಷೇಪಿಸಲು ತಾನು ಹೀಗೆ ಹೇಳಿದ್ದೇನೆ ಎಂದು ಗುಹಾ ಟ್ವೀಟ್ ಮಾಡಿದ್ದಾರೆ.
ಗುಹಾ ಪ್ರತಿಕ್ರಿಯೆಯನ್ನು ಸ್ವಾಗತಿಸಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, “ನಿಮ್ಮ ಸ್ಪಷ್ಟನೆಗೆ ವಂದನೆಗಳು. ಪ್ರಧಾನಿಯ ಕಠಿಣ ಪರಿಶ್ರಮವು ವಾಸ್ತವಿಕವಾಗಿ ದೇವನ್ನು ವಿಭಜಿಸುವುದಕ್ಕಿಂತ ಹೆಚ್ಚಿನ ಪರಿಣಾಮವನ್ನು ಹೊಂದಿರುವುದಿಲ್ಲ ಎಂಬುದು ನಿಮ್ಮ ಹೇಳಿಕೆಯ ಅರ್ಥವಾಗಿದೆ ಎಂದು ಭಾವಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಮರುಟ್ವೀಟ್ ಮಾಡಿರುವ ಗುಹಾ, ಕಳೆದ ಹಲವು ವರ್ಷಗಳಿಂದ ಮೋದಿಯ ಕಾರ್ಯನೀತಿಯನ್ನು ಕಟುವಾಗಿ ಟೀಕಿಸುತ್ತಾ ಬಂದಿದ್ದೇನೆ. ಮೋದಿ ರಾಜಕೀಯದಲ್ಲಿ ಅನುಭವಿ, ಆದರೆ ಐದನೇ ತಲೆಮಾರಿನ ರಾಹುಲ್ ಆಡಳಿತದ ಬಗ್ಗೆ ಅನನುಭವಿ. ಇದು ಮೋದಿಗೆ ಹೆಚ್ಚಿನ ಅನುಕೂಲ ಒದಗಿಸಿದೆ ಎಂಬುದು ತನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ. ಶುಕ್ರವಾರ ಕೇರಳ ಸಾಂಸ್ಕೃತಿಕ ಉತ್ಸವದಲ್ಲಿ ರಾಹುಲ್ ಗಾಂಧಿ ಬಗ್ಗೆ ಗುಹಾ ನೀಡಿದ್ದ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಹೇಳಿಕೆಗಳ ಸರಣಿ ಮುಂದುವರಿದಿದೆ.
ಗುಹಾ ಹೇಳಿಕೆ ಸ್ವಾಗತಾರ್ಹವಾಗಿದ್ದು ಅವರು ಇನ್ನಷ್ಟು ವಿವರಿಸುವ ಅಗತ್ಯವಿದೆ ಎಂದು ಬಲಪಂಥೀಯ ಬೆಂಬಲಿಗರು ಟ್ವೀಟ್ ಮಾಡಿದ್ದರೆ, ಕಾಂಗ್ರೆಸ್ ಸೇರಿದಂತೆ ಹಲವರು ವಿರೋಧಿಸಿದ್ದಾರೆ.