ಕಾಶ್ಮೀರಿ ಪಂಡಿತರ ಜೊತೆ ಏಕತೆ ಪ್ರದರ್ಶಿಸಿದ ಶಹೀನ್ ಬಾಗ್ ಸಿಎಎ ಪ್ರತಿಭಟನಕಾರರು
ಹೊಸದಿಲ್ಲಿ: ಇಲ್ಲಿನ ಶಹೀನ್ ಬಾಗ್ ನಲ್ಲಿ ನಡೆಯಲಿರುವ ಕಾರ್ಯಕ್ರಮ ಕಾಶ್ಮೀರಿ ಪಂಡಿತರ ಮೇಲಿನ ದಾಳಿಯನ್ನು ಸಂಭ್ರಮಿಸುವಂತಿದೆ ಎಂದು ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಒಂದರಲ್ಲಿ ಆರೋಪಿಸಿದ ನಂತರ ಶಹೀನ್ ಭಾಗ್ ನ ಪ್ರತಿಭಟನಕಾರರು ಕಾಶ್ಮೀರಿ ಪಂಡಿತರನ್ನು ಆಹ್ವಾನಿಸಿ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಶಹೀನ್ ಭಾಗ್ ಪ್ರತಿಭಟನೆಯ ಅಫಿಶಿಯಲ್ ಟ್ವಿಟರ್ ಹ್ಯಾಂಡಲ್ , ಜನವರಿ 19ರ ಕಾರ್ಯಕ್ರಮ ಕಾಶ್ಮೀರ ಪಂಡಿತರ ಮೇಲಿನ ದಾಳಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಇದೇ ಕಾರಣದಿಂದ ಇಂದು ಪ್ರತಿಭಟನಕಾರರು ಇಬ್ಬರು ಕಾಶ್ಮೀರಿ ಪಂಡಿತರಾದ ಇಂದರ್ ಸಲೀಮ್ ಮತ್ತು ಎಂ.ಕೆ ರೈನಾರನ್ನು ಆಹ್ವಾನಿಸಿದ್ದರು.
ಇದೇ ಸಂದರ್ಭ ಇಂಡಿಯಾ ಟುಡೆ ಜೊತೆ ಮಾತನಾಡಿದ ರೈನಾ, "ಕಾಶ್ಮೀರಿ ಪಂಡಿತರ ಜೊತೆ ಒಗ್ಗಟ್ಟು ಪ್ರದರ್ಶಿಸುವ ಶಹೀನ್ ಭಾಗ್ ಪ್ರತಿಭಟನಕಾರರು ನಮ್ಮ ನೋವನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಇಂತಹ ವಿರಳ ನಡೆ ಭಾರತದಲ್ಲಿ ಅಭೂತಪೂರ್ವ. ಇಂತಹ ನಡೆಗಳು ನಮ್ಮ ದೇಶಕ್ಕೊಂದು ಹೊಸ ಆಯಾಮವನ್ನು ನೀಡುತ್ತದೆ. ಇವರ ಪ್ರತಿಭಟನೆಯು ಪ್ರಜಾಪ್ರಭುತ್ವ ಮತ್ತು ಮಾನವೀಯ ಭಾರತಕ್ಕಾಗಿ" ಎಂದರು.