ಸಿಎಎ ಕುರಿತ ನಿಲುವು ಬದಲಿಸಲು ಹೇಳಿದ್ದರಿಂದ ದಿಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಬಿಜೆಪಿ ಮಿತ್ರಪಕ್ಷ ಎಸ್ ಎಡಿ
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ತಾನು ಹೊಂದಿರುವ ನಿಲುವನ್ನು ಬದಲಾಯಿಸಲು ಮಿತ್ರ ಪಕ್ಷ ಬಿಜೆಪಿ ಹೇಳಿದ್ದು, ಪಕ್ಷ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ ಹಾಗೂ ಇದೇ ಕಾರಣಕ್ಕೆ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಶಿರೋಮಣಿ ಅಕಾಲಿ ದಳದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಚುನಾವಣೆ ಕುರಿತಂತೆ ಬಿಜೆಪಿ ಜತೆ ಎರಡು ಸಭೆಗಳು ನಡೆದಿದ್ದರೂ ಸಿಎಎ ಕುರಿತ ನಿಲುವು ಮರುಪರಿಶೀಲಿಸುವಂತೆ ಹೇಳಲಾಗಿತ್ತು ಎಂದು ಅವರು ಬಹಿರಂಗಪಡಿಸಿದ್ದು ತಮ್ಮ ಪಕ್ಷ ಇದಕ್ಕೆ ನಿರಾಕರಿಸಿದೆ ಎಂದು ಹೇಳಿದ್ದಾರೆ. ಕಾಯಿದೆಯಿಂದ ಮುಸ್ಲಿಮರನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ಅಕಾಲಿ ದಳ ಬಲವಾಗಿ ನಂಬಿದೆ.
ಬಿಜೆಪಿ ಜತೆಗಿನ ಸೀಟು ಹಂಚಿಕೆ ಸೂತ್ರಕ್ಕೆ ಒಪ್ಪಿಗೆಯಾಗದೇ ಇದ್ದುದರಿಂದ ತಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ಸುದ್ದಿಯನ್ನು ಸಿರ್ಸಾ ನಿರಾಕರಿಸಿದ್ದಾರೆ. ಅಕಾಲಿ ದಳ ಹಿಂದಿನಿಂದಲೂ ದಿಲ್ಲಿಯ 70 ಸೀಟುಗಳ ಪೈಕಿ ಕಲ್ಕಾಜಿ, ರಜೌರಿ ಗಾರ್ಡನ್ ಹಾಗೂ ಹರಿನಗರ ಕ್ಷೇತ್ರಗಳಿಂದ ಬಿಜೆಪಿ ಜತೆಗಿನ ಮೈತ್ರಿ ಭಾಗವಾಗಿ ಸ್ಪರ್ಧಿಸುತ್ತಿತ್ತು. 2013 ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಪಕ್ಷ ಜಯ ಸಾಧಿಸಿದ್ದರೆ, 2015ರಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಅದು ಜಯ ಸಾಧಿಸಿರಲಿಲ್ಲ.
``ನಾವು ಸಿಎಎ ವಿರುದ್ಧವಲ್ಲ, ಆದರೆ ಮುಸ್ಲಿಮರನ್ನೂ ಅದರ ಭಾಗವಾಗಿಸಬೇಕು'' ಎಂದು ಸಿರ್ಸಾ ಹೇಳಿದರು.