2014ರ ಚುನಾವಣೆಯ ಬಳಿಕ ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾಗಿದ್ದನ್ನು ನಿರಾಕರಿಸಿದ ಶಿವಸೇನೆ
ಮುಂಬೈ,ಜ.22: ಮಹಾರಾಷ್ಟ್ರ ವಿಧಾನಸಭೆಗೆ 2014ರ ಚುನಾವಣೆಗಳ ಬಳಿಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಮ್ಮಿಶ್ರ ಸರಕಾರ ರಚನೆಗಾಗಿ ತಾನು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ್ದೆ ಎಂಬ ಆ ಪಕ್ಷದ ನಾಯಕ ಅಶೋಕ್ ಚವಾಣ್ ಅವರ ಹೇಳಿಕೆಯನ್ನು ಬುಧವಾರ ತಿರಸ್ಕರಿಸಿರುವ ಶಿವಸೇನೆಯು, ಆ ಸಮಯದಲ್ಲಿ ಅಂತಹ ಪ್ರಸ್ತಾವಕ್ಕೆ ಯಾವುದೇ ವೌಲ್ಯವಿದ್ದಿರಲಿಲ್ಲ ಎಂದು ಹೇಳಿದೆ.
ಆದರೆ,ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಬಿಜೆಪಿಯ ರಾಜಕೀಯ ಕುತಂತ್ರಗಳು ಯಶಸ್ವಿಯಾಗಲು ಅವಕಾಶ ನೀಡಲಿಲ್ಲ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೈತ್ರಿ ಪ್ರಸ್ತಾವನೆಯನ್ನು ತಿರಸ್ಕರಿಸಲಿಲ್ಲ, ಹೀಗಾಗಿ 2019ರ ಚುನಾವಣೆಗಳ ಬಳಿಕ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ತನ್ನ ಮೈತ್ರಿಯು ಸಾಧ್ಯವಾಯಿತು ಎಂದು ಶಿವಸೇನೆ ತಿಳಿಸಿದೆ.
ಇತ್ತೀಚಿಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಚವಾಣೆ ,2014ರ ವಿಧಾನಸಭಾ ಚುನಾವಣೆಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಶಿವಸೇನೆಯು ಕಾಂಗ್ರೆಸ್ ಮತ್ತು ಎನ್ಸಿಪಿ ಮುಂದೆ ಮೈತ್ರಿ ಪ್ರಸ್ತಾವವೊಂದನ್ನು ಇರಿಸಿತ್ತು. ಆದರೆ ಕಾಂಗ್ರೆಸ್ ಅದನ್ನು ತಕ್ಷಣವೇ ತಿರಸ್ಕರಿಸಿತ್ತು ಎಂದು ಹೇಳಿದ್ದರು.
ಚವಾಣ್ ಹೇಳಿಕೆಯನ್ನು ತಿರಸ್ಕರಿಸಿರುವ ಶಿವಸೇನೆಯ ಮುಖವಾಣಿ ‘ಸಾಮನಾ’ದ ಸಂಪಾದಕೀಯವು,2014ರ ಚುನಾವಣೆ ಗಳಲ್ಲಿ ಸೇನೆ,ಬಿಜೆಪಿ,ಕಾಂಗ್ರೆಸ್ ಮತ್ತು ಎನ್ಸಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಚವಾಣ್ ಹೇಳಿಕೆಯಲ್ಲಿ ಯಾವುದೇ ತರ್ಕವಿಲ್ಲ. ಅವರ ಹೇಳಿಕೆಯನ್ನು ಸೇನೆ ಮತ್ತು ಎನ್ಸಿಪಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದೆ.