ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಗುವಾಹತಿ : ಕೇಂದ್ರ ಸರಕಾರದ ಪ್ರತಿಕ್ರಿಯೆ ಆಲಿಸುವ ವರೆಗೆ ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಬಳಿಕ, ಈಶಾನ್ಯ ಭಾರತದ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ ಹಾಗೂ ಅರುಣಾಚಲ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದರು ಹಾಗೂ ಪ್ರತಿಭಟನೆ, ಧರಣಿಯಲ್ಲಿ ಪಾಲ್ಗೊಂಡರು.
‘‘ನಾವು ಬುಧವಾರ ತರಗತಿಗೆ ಹಾಜರಾಗಿಲ್ಲ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಈ ತಿಂಗಳ ಆರಂಭದಲ್ಲಿ ಅಧಿಸೂಚನೆ ನೀಡಲಾದ ಗಝೆಟ್ ಪ್ರತಿ ದಹಿಸಿದೆವು’’ ಎಂದು ಗುವಾಹಟಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೂನ್ ತೆಂಡೂಲ್ಕರ್ ಹೇಳಿದ್ದಾರೆ.
‘ಈಶಾನ್ಯ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಭ್ರಾತೃತ್ವ’ದ ಅಡಿಯಲ್ಲಿ ಕರೆ ನೀಡಲಾಗಿದ್ದ ಸಂಪೂರ್ಣ ಬಂದ್ನ ಒಂದು ಭಾಗವಾಗಿ ಬುಧವಾರ ಈ ಪ್ರತಿಭಟನೆ ನಡೆಯಿತು.
ಸಂಪೂರ್ಣ ಮುಚ್ಚಿರುವ ವಿಶ್ವವಿದ್ಯಾನಿಲಯಗಳಲ್ಲಿ ಗುವಾಹತಿ ವಿ.ವಿ., ಕಾಟನ್ ವಿ.ವಿ, ಈಶಾನ್ಯ ಹಿಲ್ ವಿ.ವಿ., ದಿಬ್ರುಗಢ ವಿ.ವಿ., ತೇಝ್ಪುರ ವಿ.ವಿ., ಅಸ್ಸಾಂ ಮಹಿಳಾ ವಿ.ವಿ., ನಾಗಾಲ್ಯಂಡ್ ವಿ.ವಿ., ರಾಜೀವ್ ಗಾಂಧಿ ವಿ.ವಿ., ಅಸ್ಸಾಂ ಕೃಷಿ ವಿ.ವಿ, ಈಶಾನ್ಯ ವಲಯ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆ ಸೇರಿವೆ.