ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ ನಿರ್ಭಯಾ ಅತ್ಯಾಚಾರಿಗಳು
ಹೊಸದಿಲ್ಲಿ, ಜ.24: ತಿಹಾರ ಜೈಲು ಅಧಿಕಾರಿಗಳು ನಿರ್ದಿಷ್ಟ ದಾಖಲೆಗಳನ್ನು ಹಸ್ತಾಂತರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಪರ ವಕೀಲರು ದಿಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಜೈಲು ಅಧಿಕಾರಿಗಳು ಅಕ್ಷಯ ಕುಮಾರ್ ಸಿಂಗ್(31) ಹಾಗೂ ಪವನ ಸಿಂಗ್ಗೆ(25)ಪರಿಹಾರಾತ್ಮಕ ಅರ್ಜಿ ಸಲ್ಲಿಕೆಗೆ ಬೇಕಾಗಿರುವ ದಾಖಲೆಗಳನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಾಗಿದೆ ಎಂದು ವಕೀಲ ಎಪಿ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ.
ನಿರ್ಭಯಾ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಆರೋಪಿಗಳು ಮರಣದಂಡನೆಯಿಂದ ಪಾರಾಗಲು ಮತ್ತೊಂದು ರಕ್ಷಣಾತ್ಮಕ ಹೆಜ್ಜೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಕೀಲ ಎಪಿ ಸಿಂಗ್ ಸಲ್ಲಿಸಿರುವ ಅರ್ಜಿ ಶನಿವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ಇತರ ಇಬ್ಬರು ಆರೋಪಿಗಳಾದ ವಿನಯಕುಮಾರ್ ಶರ್ಮಾ(26) ಹಾಗೂ ಮುಕೇಶ್ ಸಿಂಗ್(32) ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಗಳನ್ನು ತಿರಸ್ಕರಿಸಿತ್ತು.
ದಿಲ್ಲಿ ನ್ಯಾಯಾಲಯ ಇತ್ತೀಚೆಗೆ ನಾಲ್ವರು ಆರೋಪಿಗಳಾದ ವಿನಯ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್, ಮುಕೇಶ್ ಕುಮಾರ್ ಸಿಂಗ್ ಹಾಗೂ ಪವನ್ಗೆ ಫೆ.1ಕ್ಕೆ ಹೊಸತಾಗಿ ಡೆತ್ ವಾರೆಂಟ್ ಹೊರಡಿಸಿತ್ತು. ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದ ಕಾರಣ ಜ.22ಕ್ಕೆ ನಿಗದಿಯಾಗಿದ್ದ ಮರಣದಂಡನೆ ದಿನಾಂಕವನ್ನು ಮುಂದೂಡಲಾಗಿದೆ.