ಎನ್ ಪಿಆರ್ ಮಾಹಿತಿ ದುರುಪಯೋಗಪಡಿಸುವ ಸಾಧ್ಯತೆಯ ಬಗ್ಗೆ ಅಪೀಲು: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್ ಪಿಆರ್ ವಿರೋಧಿಸಿ ಸಲ್ಲಿಸಲಾಗಿರುವ ಹಲವಾರು ಹೊಸ ಅಪೀಲುಗಳನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಎನ್ ಪಿಆರ್ ಪ್ರಕ್ರಿಯೆಗೆ ತಡೆ ಹೇರಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ಸಿಎಎ ಕುರಿತಾದ ಇತರ ಅಪೀಲುಗಳ ಜತೆಗೆ ಅದನ್ನೂ ಸೇರಿಸಿ ವಿಚಾರಣೆಯನ್ನು ಮುಂದೆ ನಡೆಸಲು ನಿರ್ಧರಿಸಿದೆ.
ಎನ್ ಪಿಆರ್ ಗಾಗಿ ಸಂಗ್ರಹಿಸಲಾಗುವ ಮಾಹಿತಿಯನ್ನು ದುರುಪಯೋಗಪಡಿಸಲಾಗದು ಎಂಬುದಕ್ಕೆ ಯಾವುದೇ ಖಾತರಿಯಿಲ್ಲ ಎಂದು ಅಪೀಲಿನಲ್ಲಿ ಹೇಳಲಾಗಿದೆ. ಅದೇ ಸಮಯ ಆಧಾರ್ ಅಥವಾ ಜನಗಣತಿ ಸಂದರ್ಭ ಸಂಗ್ರಹಿಸಲಾಗುವ ಮಾಹಿತಿಯ ಗೌಪ್ಯತೆ ಕಾಪಾಡುವ ಖಾತರಿ ನೀಡಲಾಗುತ್ತದೆ ಎಂದು ಅಪೀಲುದಾರರು ಹೇಳಿದ್ದಾರೆ.
ಸಾರ್ವಜನಿಕರ ಮೇಲೆ ಸರಕಾರ ನಿಗಾ ಇಡಲು ಎನ್ ಪಿಆರ್ ಮಾಹಿತಿಯನ್ನು ಬಳಸುವ ಸಾಧ್ಯತೆಯಿದೆ. ಎನ್ಪಿಆರ್ ಪ್ರಕ್ರಿಯೆಯು ನಾಗರಿಕರ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎಂದೂ ಅಪೀಲಿನಲ್ಲಿ ಹೇಳಲಾಗಿದೆ.
ಸಿಎಎ ವಿರೋಧಿಸಿ ಸಲ್ಲಿಸಲಾಗಿರುವ ಸುಮಾರು 144 ಅಪೀಲುಗಳ ವಿಚಾರಣೆಯನ್ನು ಇತ್ತೀಚೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಸರಕಾರಕ್ಕೆ ಪ್ರತಿಕ್ರಿಯೆ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.