ಶಾಹೀನ್ ಬಾಗ್ ಪ್ರತಿಭಟನಕಾರರು ಅತ್ಯಾಚಾರಗೈದು, ಕೊಲ್ಲುತ್ತಾರೆ: ಬಿಜೆಪಿ ಸಂಸದನಿಂದ ವಿವಾದಾತ್ಮಕ ಹೇಳಿಕೆ
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಶಾಹೀನ್ ಬಾಗ್ ಪ್ರದೇಶದಲ್ಲಿ ಕಳೆದ ಹಲವಾರು ವಾರಗಳಿಂದ ಧರಣಿ ಕುಳಿತಿರುವ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನಾಕಾರರನ್ನು ಒಂದೇ ಗಂಟೆಯೊಳಗೆ ತೆರವುಗೊಳಿಸಲಾಗುವುದು ಎಂದು ಪಶ್ಚಿಮ ದಿಲ್ಲಿಯ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮ ಹೇಳಿದ್ದಾರೆ.
``ಇದು ಕೇವಲ ಇನ್ನೊಂದು ಚುನಾವಣೆಯಲ್ಲ. ಇದು ದೇಶದ ಏಕತೆಯನ್ನು ನಿರ್ಧರಿಸುವ ಚುನಾವಣೆ. ಬಿಜೆಪಿ ಫೆಬ್ರವರಿ 11ರಂದು ಅಧಿಕಾರಕ್ಕೆ ಬಂದರೆ ಅಲ್ಲಿ ಒಂದು ಗಂಟೆಯೊಳಗೆ ಒಬ್ಬನೇ ಒಬ್ಬ ಪ್ರತಿಭಟನಕಾರ ಇರುವುದಿಲ್ಲ. ಇನ್ನೊಂದು ತಿಂಗಳಲ್ಲಿ ಸರಕಾರಿ ಜಮೀನಿನಲ್ಲಿ ನಿರ್ಮಿಸಲ್ಪಟ್ಟ ಒಂದೇ ಒಂದು ಮಸೀದಿಯನ್ನು ಉಳಿಯಲು ಬಿಡುವುದಿಲ್ಲ'' ಎಂದು ವರ್ಮ ಹೇಳಿದ್ದಾರೆ.
"ಅಲ್ಲಿ (ಶಾಹೀನ್ ಬಾಗ್) ಲಕ್ಷಗಟ್ಟಲೆ ಜನ ಸೇರುತ್ತಾರೆ. ಅವರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಸೋದರಿಯರು, ಪುತ್ರಿಯರ ಮೇಳೆ ಅತ್ಯಾಚಾರಗೈದು ಕೊಲ್ಲುತ್ತಾರೆ. ಇಂದು ಸಮಯವಿದೆ. ನಾಳೆ ನಿಮ್ಮನ್ನು ಬಚಾವ್ ಮಾಡಲು ಮೋದೀ ಜಿ ಹಾಗೂ ಅಮಿತ್ ಶಾ ಬರುವುದಿಲ್ಲ''ಎಂದೂ ಅವರು ಹೇಳಿದ್ದು, ಭಾರೀ ವಿವಾದ ಸೃಷ್ಟಿಸಿದೆ.