ನಿರ್ಮಲಾ ಸ್ಥಾನಕ್ಕೆ ಕೆ.ವಿ. ಕಾಮತ್: ಬಜೆಟ್ ನಂತರ ವಿತ್ತ ಸಚಿವರ ಬದಲಾವಣೆ?
ಹೊಸದಿಲ್ಲಿ: ಈ ವರ್ಷದ ಬಜೆಟ್ ಮಂಡನೆ ನಂತರ ವಿತ್ತ ಸಚಿವೆ ಸ್ಥಾನದಿಂದ ನಿರ್ಮಲಾ ಸೀತಾರಾಮನ್ ಅವರನ್ನು ಕೈಬಿಟ್ಟು ಹಿರಿಯ ಬ್ಯಾಂಕರ್ ಹಾಗೂ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕೆ ವಿ ಕಾಮತ್ ಅವರನ್ನು ನೂತನ ವಿತ್ತ ಸಚಿವರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು nationalheraldindia.com ವರದಿ ತಿಳಿಸಿದೆ.
ದೇಶದ ಅರ್ಥವ್ಯವಸ್ಥೆಯನ್ನು ನಿರ್ಮಲಾ ಸೀತಾರಾಮನ್ ಹಾಗೂ ವಿತ್ತ ಸಹಾಯಕ ಸಚಿವ ಅನುರಾಗ್ ಠಾಕುರ್ ನಿರ್ವಹಿಸಿದ ರೀತಿಯಿಂದ ಮೋದಿ ಸರಕಾರ ತೀವ್ರ ಅಸಮಾಧಾನಗೊಂಡಿದೆ ಎಂದು ವರದಿ ತಿಳಿಸಿದೆ. ಸ್ವಪನ್ ದಾಸಗುಪ್ತಾ ಹಾಗೂ ನೀತಿ ಆಯೋಗ ಸಿಇಒ ಅಮಿತಾಭ್ ಕಾಂತ್ ಅವರನ್ನು ಕೂಡ ಕೇಂದ್ರ ಸಂಪುಟಕ್ಕೆ ಸೇರಿಸುವ ಸಾಧ್ಯತೆಯಿದೆ.
ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷರಾಗುವ ಮುನ್ನ ಕೆ ವಿ ಕಾಮತ್ ಅವರು ಇನ್ಫೋಸಿಸ್ ಅಧ್ಯಕ್ಷರಾಗಿ ಹಾಗೂ ಐಸಿಐಸಿಐ ಬ್ಯಾಂಕಿನ ಅಧಿಕಾರೇತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕಾಮತ್ ಅವರು ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿವಿಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ. ಹೌಸ್ಟನ್ ಮೂಲದ ತೈಲ ಕಂಪೆನಿ ಶ್ಲುಂಬರ್ಗರ್ ಹಾಗೂ ಭಾರತೀಯ ಫಾರ್ಮಾ ಕಂಪೆನಿ ಲುಪಿನ್ ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ.