ಕುನಾಲ್ ಮೇಲಿನ ನಿಷೇಧ ನಿಯಮಗಳ ಸಂಪೂರ್ಣ ಉಲ್ಲಂಘನೆ: ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮುಖ್ಯಸ್ಥ
ಚಂಡೀಗಢ: ಕುನಾಲ್ ಕಾಮ್ರಾ ವಿರುದ್ಧ ನಿಷೇಧ ಹೇರಿರುವ ಇಂಡಿಗೋ, ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಗೋ ಏರ್ ಗಳ ನಿರ್ಧಾರ ವಿಮಾನಯಾನ ನಿಯಮಗಳ ಸಂಪೂರ್ಣ ಉಲ್ಲಂಘನೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಧಾನ ನಿರ್ದೇಶಕ (ಡಿಜಿಸಿಎ) ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ ಎಂದು huffingtonpost.in ವರದಿ ಮಾಡಿದೆ.
ವಿಮಾನದಲ್ಲಿ ಅಶಿಸ್ತಿನ ನಡವಳಿಕೆ ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿದ್ದರೆ ವಿಮಾನಯಾನ ಸಂಸ್ಥೆಯು ಮೊದಲು ಪ್ರಯಾಣಿಕರ ಮೇಲೆ 30 ದಿನಗಳ ತಾತ್ಕಾಲಿಕ ನಿಷೇಧ ವಿಧಿಸಬೇಕು ನಂತರ ಘಟನೆಯ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಯಬೇಕು ಎಂದವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
"ಮಾತುಗಳಿಗೆ ಮಾತ್ರ ಸೀಮಿತವಾಗಿದ್ದ ಅಶಿಸ್ತಿನ ನಡವಳಿಕೆಗಳಿಗೆ ನಿಷೇಧವು 3 ತಿಂಗಳುಗಳಿಗಿಂತ ಹೆಚ್ಚಾಗಬಾರದು" ಎಂದವರು ಹೇಳಿದರು.
ಕುನಾಲ್ ಕಾಮ್ರಾ ಮೇಲಿನ ನಿಷೇಧದ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ವಿಮಾನದಲ್ಲಿದ್ದ ಸಿಬ್ಬಂದಿಯ ದೂರನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. 6 ತಿಂಗಳ ಕಾಲ ಪ್ರಯಾಣಿಕರೊಬ್ಬರಿಗೆ ನಿಷೇಧ ಹೇರುವ ಮೊದಲು ಸಂಸ್ಥೆಗಳು ಆಂತರಿಕ ತನಿಖೆ ಪೂರ್ಣಗೊಳ್ಳುವವರೆಗೆ ಕಾಯಬೇಕಿತ್ತು ಎಂದವರು ಹೇಳಿದರು.