ರಾಜಸ್ಥಾನ: ರಾಷ್ಟ್ರಧ್ವಜ ಅರಳಿಸದಂತೆ ಶಾಲೆಯ ಪ್ರಾಂಶುಪಾಲರಿಗೆ ಬೆದರಿಕೆ
ಹೊಸದಿಲ್ಲಿ, ಜ. 29: ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಅರಳಿಸದಂತೆ ರಾಜಸ್ಥಾನದ ಪ್ರತಾಪ್ಗಢ ಜಿಲ್ಲೆಯ ಸರಕಾರಿ ಶಾಲೆಯ ಪ್ರಾಂಶುಪಾಲರಿಗೆ ಮೇಲ್ಜಾತಿಯ ವ್ಯಕ್ತಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ತ್ರಿವರ್ಣ ಧ್ವಜ ಅರಳಿಸದಂತೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸದಂತೆ ಹಾಗೂ ದಲಿತ ವಿದ್ಯಾರ್ಥಿನಿ ಓರ್ವರನ್ನು ಗೌರವಿಸಲು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸದಂತೆ ಮೇಲ್ಜಾತಿ ಹಾಗೂ ಹಿಂದುಳಿದ ಸಮುದಾಯದ ಸದಸ್ಯರು ಬೆದರಿಕೆ ಒಡ್ಡಿದ್ದಾರೆ ಹಾಗೂ ಕಿರುಕುಳ ನೀಡಿದ್ದಾರೆ ಎಂದು ಪ್ರಾಂಶುಪಾಲ ಧೀರ್ ಸಿಂಗ್ ಮೀನಾ ಆರೋಪಿಸಿದ್ದಾರೆ.
ಈ ಘಟನೆಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲಿನ ತನ್ನ ನಂಬಿಕೆಯನ್ನು ಬುಡಮೇಲು ಮಾಡಿದೆ ಎಂದು ಮೀನಾ ಅವರು ಜನವರಿ 26ರಂದು ಸಂಬಂಧಿಸಿದ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ. ದಿನದ ಬಳಿಕ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಅಖಿಲ ಭಾರತೀಯ ಸಫಾಯಿ ಮಜ್ಜೂರ್ ಕಾಂಗ್ರೆಸ್, ಅನುಶ್ಚಿತ್ ಜಾತಿ ಜಂಜತಿ ಆರಕ್ಷಣ ಮಂಚ್ ಹಾಗೂ ಬಹುಜನ್ ಕ್ರಾಂತಿ ಮೋರ್ಚಾ ಪ್ರತಾಪ್ಗಢದ ಜಿಲ್ಲಾ ದಂಡಾಧಿಕಾರಿಗೆ ಪತ್ರ ಬರೆದಿದೆ.