ಬಿಜೆಪಿಯನ್ನು ವಿರೋಧಿಸಿದರೆ ಹಿಂದೂಗಳನ್ನು ವಿರೋಧಿಸಿದಂತಲ್ಲ: ಆರೆಸ್ಸೆಸ್
ಪಣಜಿ.ಫೆ.9: ಬಿಜೆಪಿಯು ಕೇವಲ ಒಂದು ರಾಜಕೀಯ ಪಕ್ಷವಾಗಿದೆ ಮತ್ತು ಅದನ್ನು ಹಿಂದುಗಳೊಂದಿಗೆ ಸಮೀಕರಿಸಬಾರದು ಎಂದು ಆರೆಸ್ಸೆಸ್ನ ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯ್ಯಾಜಿ ಅವರು ಹೇಳಿದ್ದಾರೆ. ಹಿಂದೂಗಳೆಂದಿಗೂ ಕೋಮುವಾದಿಗಳಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.
ಭಾರತದ ಬಗ್ಗೆ ಆರೆಸ್ಸೆಸ್ನ ಪರಿಕಲ್ಪನೆಯ ಕುರಿತು ಗೋವಾದಲ್ಲಿ ನಡೆದ ಎರಡು ದಿನಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದುತ್ವವು ಭಾರತದ ಆತ್ಮವಾಗಿದೆ, ಅದನ್ನು ತೆಗೆದರೆ ದೇಶವು ಜೀವವನ್ನು ಕಳೆದುಕೊಳ್ಳುತ್ತದೆ ಎಂದರು.
ಕೆಲವು ಹಿಂದುಗಳು ಹಾಲಿ ಸರಕಾರವನ್ನು ವಿರೋಧಿಸುತ್ತಿದ್ದಾರೆ ಮತ್ತು ಹಿಂದೂಗಳು ಹಿಂದುಗಳ ಶತ್ರುಗಳಾಗುತ್ತಿದ್ದಾರೆ ಎನ್ನುವುದು ಇದರ ಅರ್ಥವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಹಿಂದು ಬಿಜೆಪಿಯಲ್ಲ ಮತ್ತು ಬಿಜೆಪಿಯನ್ನು ವಿರೋಧಿಸಿದರೆ ಹಿಂದುಗಳನ್ನು ವಿರೋಧಿಸಿದಂತಲ್ಲ. ಅದು ಕೇವಲ ರಾಜಕೀಯ ಮತ್ತು ಬಿಜೆಪಿಯನ್ನು ಹಿಂದು ಪರಿಕಲ್ಪನೆಯೊಂದಿಗೆ ಗೊಂದಲ ಮಾಡಿಕೊಳ್ಳಬಾರದು ಎಂದರು.
ಆರೆಸ್ಸೆಸ್ ಕೋಮುವಾದಿಯೇ ಎಂಬ ಪ್ರಶ್ನೆಗೆ,ಅದು ಯಾರೇ ಆದರೂ ಕೋಮುವಾದವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎನ್ನ್ನುವುದನ್ನು ಅವಲಂಬಿಸಿದೆ ಎಂದು ಅವರು ಉತ್ತರಿಸಿದರು.