ಶಬರಿಮಲೆ ವಿವಾದ: ಪ್ರಕರಣದ ವಿಚಾರಣೆ ವಿಸ್ತ್ರತ ಪೀಠಕ್ಕೆ ವರ್ಗಾವಣೆ
ಹೊಸದಿಲ್ಲಿ,ಫೆ.10: ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಪ್ರಶ್ನೆಗಳನ್ನು ವಿಸ್ತ್ರತ ಪೀಠದ ಪರಿಶೀಲನೆಗೆ ಒಪ್ಪಿಸುವ ತನ್ನ ಐವರು ನ್ಯಾಯಾಧೀಶರ ಪೀಠದ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಸಂವಿಧಾನ ಮತ್ತು ಶ್ರದ್ಧೆಯಡಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಒಂಭತ್ತು ನ್ಯಾಯಾಧೀಶರ ವಿಸ್ತ್ರತ ಪೀಠವು ಪರಿಶೀಲಿಸಬೇಕಾದ ಏಳು ಪ್ರಶ್ನೆಗಳನ್ನು ರೂಪಿಸಿದ್ದು,ಇವುಗಳಲ್ಲಿ ಸಂವಿಧಾನದ ವಿಧಿ 25ರಡಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ವ್ಯಾಪ್ತಿ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಗುಂಪುಗಳ ನಂಬಿಕೆಗಳ ಸ್ವಾತಂತ್ರ್ಯಗಳ ನಡುವೆ ಪರಸ್ಪರ ಪ್ರಭಾವ ಕುರಿತು ಪ್ರಶ್ನೆಗಳೂ ಸೇರಿವೆ.
ಧಾರ್ಮಿಕ ಆಚರಣೆಗಳು ಮತ್ತು ಸಂವಿಧಾನದ 25(2)(ಬಿ) ವಿಧಿಯಲ್ಲಿನ ‘ಹಿಂದು ವರ್ಗಗಳು ’ಪದಗಳ ಅರ್ಥದ ಬಗ್ಗೆಯೂ ವಿಸ್ತ್ರತ ಪೀಠವು ನ್ಯಾಯಾಂಗ ಪುನರ್ಪರಿಶೀಲನೆಯನ್ನು ನಡೆಸಲಿದೆ ಎಂದು ಪೀಠವು ತಿಳಿಸಿತು.
ನಿರ್ದಿಷ್ಟ ಧರ್ಮ ಅಥವಾ ಧಾರ್ಮಿಕ ಪಂಥಕ್ಕೆ ಸೇರಿರದ ವ್ಯಕ್ತಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ಆ ಧರ್ಮ ಅಥವಾ ಪಂಥದ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವ ಅಧಿಕಾರವನ್ನೂ ಸರ್ವೋಚ್ಚ ನ್ಯಾಯಾಲಯವು ಪರಿಶೀಲಿಸಲಿದೆ.