ಎನ್ಆರ್ಸಿಗಾಗಿ ಬಂದವರೆಂದು ಮಹಾರಾಷ್ಟ್ರದಲ್ಲಿ ಐವರನ್ನು ವಶಕ್ಕೆ ತೆಗೆದುಕೊಂಡ ಗ್ರಾಮಸ್ಥರು !
ಮುಂಬೈ, ಫೆ. 10: ಬೆಳೆ ವಿಫಲವಾದ ಹಿನ್ನೆಲೆಯಲ್ಲಿ ಆರ್ಥಿಕ ನೆರವು ಕೋರಿ ಬಿರ್ಭೂಮ್ ಗ್ರಾಮ ತಲುಪಿದ ಮಹರಾಷ್ಟ್ರದ ನಾಲ್ವರು ಮಹಿಳೆಯರು ಹಾಗೂ ಓರ್ವ ಬಾಲಕಿಯನ್ನು ರಾಷ್ಟ್ರೀಯ ಪೌರತ್ವ ನೋಂದಣಿ ಮಾಹಿತಿ ಪಡೆಯಲು ಬಂದವರು ಎಂದು ತಪ್ಪು ತಿಳಿದು ಗ್ರಾಮಸ್ಥರು ಎರಡು ಗಂಟೆಗಳ ಕಾಲ ವಶದಲ್ಲಿ ಇರಿಸಿಕೊಂಡ ಘಟನೆ ಇಲ್ಲಿ ರವಿವಾರ ನಡೆದಿದೆ.
ಮಹಾರಾಷ್ಟ್ರ ಸೋಲಾಪುರದ ಕಚರೇವಾಡಿ ಗ್ರಾಮದ ಸುಮಾರು 25 ಜನರು ಕೆಲವು ದಿನಗಳ ಹಿಂದೆ ಇಲ್ಲಂಬಝಾರ್ಗೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ನಲ್ಲಿ ಸುರಿದ ಅಕಾಲಿಕ ಮಳೆಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿದೆ ಎಂದು 25 ಜನರಿದ್ದ ಗುಂಪು ತಿಳಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಗುಂಪು ಇಲ್ಲಂಬಝಾರ್ನಲ್ಲಿ ಟೆಂಟ್ ನಿರ್ಮಿಸಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನೆರವು ಯಾಚಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
‘‘ಇದು ತಪ್ಪು ತಿಳಿವಳಿಕೆಯಿಂದ ಸಂಭವಿಸಿರುವುದು. ಮಹಿಳೆಯರ ಗುಂಪು ಆರ್ಥಿಕ ನೆರವು ಕೋರಲು ಈ ಗ್ರಾಮಕ್ಕೆ ಆಗಮಿಸಿದ್ದಾರೆ. ಆದರೆ, ಜನರು ಘೇರಾವ್ ಹಾಕಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಯಿತು. ಈ ಸಂದರ್ಭ ಪೊಲೀಸರು ಅವರನ್ನು ರಕ್ಷಿಸಿದರು’’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ಯಾಮ್ ಸಿಂಗ್ ಹೇಳಿದ್ದಾರೆ.