ನಿಜವಾದ ರಾಷ್ಟ್ರಪ್ರೇಮ ಏನೆಂಬುದನ್ನು ನಮ್ಮ ಗೆಲುವು ಸಾಬೀತುಪಡಿಸಲಿದೆ: ಮನೀಶ್ ಸಿಸೋಡಿಯಾ
ಹೊಸದಿಲ್ಲಿ: "ನಿಜವಾದ ರಾಷ್ಟ್ರಪ್ರೇಮವೆಂದರೆ ಜನರಿಗಾಗಿ ಕೆಲಸ ಮಾಡುವುದು'' ಎಂಬುದು ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿಜಯ ಸೂಚಿಸಲಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಇಂದು ನಡೆಯುತ್ತಿರುವ ಮತ ಎಣಿಕೆಯಲ್ಲಿ ತಮ್ಮ ಪಕ್ಷ ವಿಜಯದತ್ತ ದಾಪುಗಾಲು ಹಾಕುತ್ತಿದ್ದಂತೆಯೇ ಸಿಸೋಡಿಯಾ ಈ ಹೇಳಿಕೆ ನೀಡಿದ್ದಾರೆ.
"ನಿಮಗೆ ರಾಜಕೀಯದಲ್ಲಿ ಅವಕಾಶ ದೊರೆತರೆ ನೀವು ಜನರಿಗಾಗಿ ಕೆಲಸ ಮಾಡಬೇಕು, ಶಿಕ್ಷಣ, ಆಸ್ಪತ್ರೆಗಳ ಅಭಿವೃದ್ಧಿಗೆ ಕೆಲಸ ಮಾಡಬೇಕೆಂಬುದು ನಿಜವಾದ ದೇಶಭಕ್ತಿ ಎಂಬುದನ್ನು ನಮ್ಮ ವಿಜಯ ಸಾಬೀತುಪಡಿಸಲಿದೆ,'' ಎಂದು ಅವರು ಹೇಳಿದರು.
"ಒಂದು ಸರಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಅದು ಗೆಲ್ಲಬಹುದು ಎಂದು ದಿಲ್ಲಿ ಸಾಬೀತುಪಡಿಸಲಿದೆ. ನಾವು ಶಾಲೆ, ಆಸ್ಪತ್ರೆಗಳ ಕುರಿತಂತೆಯೇ ಮಾತನಾಡಿದರೆ ಅತ್ತ ಕಡೆಯವರು ಹಿಂದು-ಮುಸ್ಲಿಂ ವಿಚಾರವನ್ನೇ ಮಾತನಾಡಿ ವಾತಾವರಣವನ್ನು ಕೆಡಿಸಲು ಯತ್ನಿಸಿದರು'' ಎಂದು ಸಿಸೋಡಿಯಾ ಬಿಜೆಪಿಯನ್ನು ಗುರಿಯಾಗಿಸಿ ಹೇಳಿದರು.
Next Story