ಭಗತ್ ಸಿಂಗ್, ಇತರ ಕ್ರಾಂತಿಕಾರಿಗಳನ್ನು ರಕ್ಷಿಸಲು ಗಾಂಧೀಜಿ ಪ್ರಯತ್ನ ನಡೆಸಿರಲಿಲ್ಲ
ಮುಖ್ಯ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ವಿವಾದಾತ್ಮಕ ಹೇಳಿಕೆ
Photo: facebook.com/sanjeev.sanyal.94
ಹೊಸದಿಲ್ಲಿ: ಭಗತ್ ಸಿಂಗ್ ಮತ್ತಿತರ ಕ್ರಾಂತಿಕಾರಿಗಳನ್ನು ರಕ್ಷಿಸಲು ಮಹಾತ್ಮ ಗಾಂಧಿ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಿರುವ ಭಾರತ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್, "ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪರ್ಯಾಯ ಇತಿಹಾಸವನ್ನು ಮರೆಮಾಚಲು ಕ್ರಾಂತಿಕಾರಿಗಳ ಕಥೆಯನ್ನು ಉದ್ದೇಶಪೂರ್ವಕವಾಗಿ ದಮನಿಸಲಾಗಿದೆ" ಎಂದಿದ್ದಾರೆ ಎಂದು indianexpress.com ವರದಿ ಮಾಡಿದೆ.
'ದಿ ರಿವೊಲ್ಯೂಶನರೀಸ್: ಎ ರಿಟೆಲ್ಲಿಂಗ್ ಆಫ್ ಇಂಡಿಯಾಸ್ ಹಿಸ್ಟರಿ' ಎಂಬ ವಿಚಾರದ ಬಗ್ಗೆ ಗುಜರಾತ್ ವಿವಿಯಲ್ಲಿ ಬುಧವಾರ ಮಾತನಾಡಿದ ಸನ್ಯಾಲ್, "ನಿಜಾರ್ಥದಲ್ಲಿ ಈ ಕಥೆ ಭಾರತದ ರಾಜಕೀಯ ವ್ಯವಸ್ಥೆ ಹಾಗೂ ಸ್ವಾತಂತ್ರ್ಯಾನಂತರ ಬ್ರಿಟಿಷರಿಗೂ ಅನಾನುಕೂಲವಾಗಿತ್ತು'' ಎಂದರಲ್ಲದೆ ಕ್ರಾಂತಿಕಾರಿಗಳ ಕುರಿತಾದ ಈ ವಿಚಾರವನ್ನು ಶಾಲಾ ಪಠ್ಯದ ಭಾಗವಾಗಿಸಬೇಕು ಎಂದರು.
"ಭಗತ್ ಸಿಂಗ್ ಅಥವಾ ಬೇರೆ ಕ್ರಾಂತಿಕಾರಿಯನ್ನು ನೇಣುಗಂಬದಿಂದ ಬಚಾವ್ ಮಾಡಲು ಗಾಂಧೀಜಿ ಯಶಸ್ವಿಯಾಗುತ್ತಿದ್ದರೇ ಎಂಬುದನ್ನು ಹೇಳುವುದು ಕಷ್ಟ. ಏಕೆಂದರೆ ವಾಸ್ತವಗಳು ನಮ್ಮ ಮುಂದಿಲ್ಲ... ಅವರು ಹೆಚ್ಚು ಯಾವುದೇ ಯತ್ನ ನಡೆಸಿಲ್ಲ'' ಎಂದು ವಿವಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನುದ್ದೇಶಿಸಿ ಸನ್ಯಾಲ್ ಹೇಳಿದರು.
"ಅವರಿಗೆ (ಗಾಂಧೀಜಿ) ಹಿಂಸೆಯನ್ನು ಮನ್ನಿಸಲು ಖುಷಿಯಿತ್ತು. ಅಷ್ಟಕ್ಕೂ ಬ್ರಿಟಿಷ್ ಸೇನೆಗೆ ಭಾರತೀಯ ಸೈನಿಕರನ್ನು ಅವರು ಸೇರಿಸಿದ್ದರು. ಮೊದಲನೇ ಜಾಗತಿಕ ಯುದ್ಧಕ್ಕೆ ಬ್ರಿಟಿಷ್ ಸೇನೆಗೆ ಭಾರತೀಯ ಸೈನಿಕರನ್ನು ಸೇರಿಸಲು ಅವರಿಗೆ ಮನಸ್ಸಿತ್ತೆಂದಾದರೆ ಭಗತ್ ಸಿಂಗ್ ಕೂಡ ಅದನ್ನೇ ಮಾಡುವುದಕ್ಕೆ ಅವರು ಏಕೆ ಆಕ್ಷೇಪಿಸಬೇಕಿತ್ತು ?. ಮಲಬಾರ್ ಬಂಡಾಯದ ಸಂದರ್ಭದ ಹಿಂಸೆಯನ್ನು ಗಾಂಧೀಜಿ ತಾವೇ ನೇತೃತ್ವ ವಹಿಸಿದ್ದ ಖಿಲಾಫತ್ ಆಂದೋಲನದ ನಂತರ ಗೌಣವಾಗಿಸಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಭಗತ್ ಸಿಂಗ್ ಮತ್ತಿತರ ಕ್ರಾಂತಿಕಾರಿಗಳನ್ನು ಬಚಾವ್ ಮಾಡಲು ಅವರು ಸಾಕಷ್ಟು ಪ್ರಯತ್ನ ನಡೆಸಿಲ್ಲ ಎಂದು ಕ್ರಾಂತಿಕಾರಿಗಳೇ ಅಂದುಕೊಂಡಿದ್ದರು'' ಎಂದು ಸನ್ಯಾಲ್ ಆರೋಪಿಸಿದ್ದಾರೆ.