ಪ್ರಧಾನಿಯಿಂದ ಬಳ್ಳಾರಿ ಗ್ಯಾಂಗ್ನ ರಕ್ಷಣೆ: ಕಾಂಗ್ರೆಸ್ ಟೀಕೆ
ಹೊಸದಿಲ್ಲಿ, ಫೆ.13: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿವರವನ್ನು ಸಂಬಂಧಿತ ವೆಬ್ಸೈಟ್ನಲ್ಲಿ ದಾಖಲಿಸಬೇಕೆಂಬ ಸುಪ್ರೀಂಕೋರ್ಟ್ನ ಆದೇಶಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ, ಈ ಆದೇಶವನ್ನು ಪ್ರಧಾನಿ ಮೋದಿ ಈಗಾಗಲೇ ಚೂರು ಚೂರಾಗಿ ಹರಿದೆಸೆದಿದ್ದಾರೆ ಎಂದು ಟೀಕಿಸಿದೆ.
ಮೋದೀಜಿ ಮತ್ತು ಬಿಜೆಪಿ ಬಳ್ಳಾರಿ ಗ್ಯಾಂಗ್ನ ರಕ್ಷಣೆಗಾಗಿ ಮತ್ತೊಮ್ಮೆ ಧಾವಿಸಿದ್ದಾರೆ. ಸುಪ್ರೀಂಕೋರ್ಟ್ ಕಳಂಕಿತ ನಾಯಕರಿಗೆ ಟಿಕೆಟ್ ನೀಡಿರುವುದಕ್ಕೆ ವಿವರಣೆ ಕೇಳಿದರೆ ಕಳಂಕಿತ ನಾಯಕರನ್ನು , ಅದೂ ಲೂಟಿ ಮಾಡಿದ ಆರೋಪಿಗಳನ್ನು ಶಾಸಕರನ್ನಾಗಿ ಮಾತ್ರವಲ್ಲ ಸಚಿವರನ್ನಾಗಿಯೂ ಮಾಡಬೇಕೆಂದು ಮೋದಿ ಹೇಳುತ್ತಿದ್ದಾರೆ. ಪ್ರಧಾನಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಾಲಯ ನಿಂದನೆ ನೋಟಿಸ್ ನೀಡುತ್ತದೆಯೇ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
ಟ್ವೀಟ್ನ ಜೊತೆ ಕರ್ನಾಟಕದಲ್ಲಿ ಆನಂದ್ ಸಿಂಗ್ರನ್ನು ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವರನ್ನಾಗಿ ನೇಮಿಸಿರುವ ವರದಿಯನ್ನು ಲಗತ್ತಿಸಿದ್ದಾರೆ. ಗಣಿ ಮತ್ತು ಅರಣ್ಯ ಲೂಟಿ ಪ್ರಕರಣದಲ್ಲಿ ಆನಂದ್ ಸಿಂಗ್ ಆರೋಪಿಯಾಗಿದ್ದಾರೆ.