'ರಾಮ ಮಂದಿರವನ್ನು ಗೋರಿಗಳ ಮೇಲೆ ನಿರ್ಮಿಸಬಹುದೇ?': ಟ್ರಸ್ಟ್ ಗೆ ಪತ್ರ ಬರೆದ ಅಯೋಧ್ಯೆಯ ಮುಸ್ಲಿಮರು
ಹೊಸದಿಲ್ಲಿ: ಅಯೋಧ್ಯೆಯ ಒಂಬತ್ತು ಮಂದಿ ಮುಸ್ಲಿಮರು ಹೊಸದಾಗಿ ರಚನೆಯಾದ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಗೆ ಪತ್ರ ಬರೆದು ಹೊಸ ರಾಮ ಮಂದಿರವನ್ನು ಬಾಬರಿ ಮಸೀದಿಯಿದ್ದ 1,480 ಚದರ ಅಡಿ ಪ್ರದೇಶದ ಪಕ್ಕದ ಸ್ಥಳದಲ್ಲಿರುವ ಮುಸ್ಲಿಮರ ದಫನಭೂಮಿಯಲ್ಲಿ ನಿರ್ಮಿಸದಂತೆ ಮನವಿ ಮಾಡಿದ್ದಾರೆ.
"ಈ ಸಂಪೂರ್ಣ ಪ್ರದೇಶವನ್ನು 1949ರಿಂದ ಅಲ್ಲಿ ರಾಮನ ಮೂರ್ತಿಯನ್ನು ಮಸೀದಿಯೊಳಗೆ ಬಲವಂತವಾಗಿ ಇರಿಸಿದಂದಿನಿಂದ ಹಾಗೂ 1992ರಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದಂದಿನಿಂದ ಭಿನ್ನವಾಗಿ ಗುರುತಿಸಿದ್ದರಿಂದ ಈಗ ಗೋರಿಗಳು ಕಾಣಿಸದೇ ಇರಬಹುದು'' ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಮುಸ್ಲಿಮರಿಗೆ ಅಯೋಧ್ಯೆಯಲ್ಲಿ ಸೂಕ್ತ ಸ್ಥಳದಲ್ಲಿ ನೀಡಲಾಗಿರುವ 5 ಎಕರೆ ಸ್ಥಳವು ಒಮ್ಮೆ ಬಾಬರಿ ಮಸೀದಿಯಿದ್ದ ಸ್ಥಳದಿಂದ ಬಹಳ ದೂರವಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
``ರಾಮ ಮಂದಿರದ ಅಡಿಪಾಯವನ್ನು ಮುಸ್ಲಿಮರ ಗೋರಿಗಳ ಮೇಲೆ ಹಾಕಬಹುದೇ ಎಂಬುದನ್ನು ಟ್ರಸ್ಟ್ನ ತಜ್ಞರು ಅರಿಯಲು ಪ್ರಯತ್ನಿಸಬೇಕು,'' ಎಂದೂ ಪತ್ರದಲ್ಲಿ ಮನವಿ ಮಾಡಲಾಗಿದೆ.