ಮುಸ್ಲಿಮರನ್ನು 1947ರಲ್ಲೇ ಪಾಕಿಸ್ತಾನಕ್ಕೆ ಅಟ್ಟಬೇಕಿತ್ತು : ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಪಾಟ್ನಾ: ಸದಾ ದ್ವೇಷ ಭಾಷಣ ಮತ್ತು ವಿವಾದಾತ್ಮಕ ಹೇಳಿಕೆಗೆ ಹೆಸರಾದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು "ಮುಸ್ಲಿಮರನ್ನು 1947ರಲ್ಲೇ ಪಾಕಿಸ್ತಾನಕ್ಕೆ ಅಟ್ಟಬೇಕಿತ್ತು" ಎಂದು ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
"ಇದು ನಾವು ದೇಶಕ್ಕೆ ಬದ್ಧರಾಗಬೇಕಾದ ಸಮಯ. 1947ರ ಮುನ್ನ ಮುಹಮ್ಮದ್ ಅಲಿ ಜಿನ್ಹಾ ಇಸ್ಲಾಮಿಕ್ ದೇಶಕ್ಕಾಗಿ ಒತ್ತಡ ತಂದಿದ್ದರು. ಇದು ನಮ್ಮ ಪೂರ್ವಜರು ಮಾಡಿದ ದೊಡ್ಡ ಲೋಪ. ಇದಕ್ಕೆ ನಾವು ಬೆಲೆ ತೆರುತ್ತಿದ್ದೇವೆ. ಆ ಸಮಯದಲ್ಲೇ ಮುಸ್ಲಿಂ ಸಹೋದರರನ್ನು ಅಲ್ಲಿಗೆ ಕಳುಹಿಸಿ, ಹಿಂದೂಗಳನ್ನು ಕರೆ ತಂದಿದ್ದರೆ, ಈ ಪರಿಸ್ಥಿತಿ ಇರುತ್ತಿರಲಿಲ್ಲ. ಭರತವಂಶೀಯರು ಇಲ್ಲಿ ನೆಲೆ ಪಡೆಯದಿದ್ದರೆ ಎಲ್ಲಿಗೆ ಹೋಗಬೇಕು ಎಂದು ಬಿಹಾರದ ಪುರ್ನಿಯಾದಲ್ಲಿ ಮಾತನಾಡಿದ ಅವರು ಪ್ರಶ್ನಿಸಿದರು.
ದೇಶಾದ್ಯಂತ ಸಿಎಎ ವಿರೋಧಿ ಹೋರಾಟ ನಡೆಯುತ್ತಿರುವ ನಡುವೆಯೇ ಪಶುಸಂಗೋಪನಾ ಖಾತೆ ಸಚಿವರ ಹೇಳಿಕೆ ಹೊರಬಿದ್ದಿದೆ. ಮುಸ್ಲಿಂ ವಿರೋಧಿ ಹೇಳಿಕೆಗೆ ಹೆಸರಾಗಿರುವ ಗಿರಿರಾಜ್ ಸಿಂಗ್ ಇಂಥ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿದ್ದರೂ, ಬಿಜೆಪಿ ಮಾತ್ರ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ದೇವಬಂದ್ ಪಟ್ಟಣವನ್ನು ಭಯೋತ್ಪಾದಕರ ಗಂಗೋತ್ರಿ ಎಂದು ಸಿಂಗ್ ಕರೆದಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.