ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ಮಹಾರಾಷ್ಟ್ರದ ಈ ಗ್ರಾಮ ಪಂಚಾಯತ್
ಫೈಲ್ ಚಿತ್ರ
ಔರಂಗಾಬಾದ್, ಫೆ.22: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ವಿರೋಧಿಸಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಟ್ರೂಡ್ ಗ್ರಾಮ ಪಂಚಾಯತ್ನಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪೌರತ್ವ ಕಾಯ್ದೆ ಹಾಗೂ ಎನ್ಆರ್ಸಿ ವಿಷಯದಲ್ಲಿ ಈಗ ಸಮಾಜದಲ್ಲಿ ವ್ಯಾಪಕ ಗೊಂದಲವಿದೆ. ಇಲ್ಲಿ ವಾಸಿಸುವವರೆಲ್ಲರೂ ಭಾರತೀಯರು, ಆದರೆ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಲು ಇವರ ಬಳಿ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ಈ ಗ್ರಾಮದಲ್ಲಿ ಜಾರಿಯಾಗಬಾರದು ಎಂದು ಫೆ.2ರಂದು ನಡೆದ ಪಟ್ರೂಡ್ ಗ್ರಾಮಪಂಚಾಯತ್ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದ್ದು ಈ ನಿರ್ಣಯದ ಪ್ರತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿಷಯದಲ್ಲಿ ಸರಕಾರ ತೆಗೆದುಕೊಂಡಿರುವ ಕ್ರಮಗಳು ಗ್ರಾಮದ ಸಾಮಾಜಿಕ ಬಂಧದ ಮೇಲೆ ಪರಿಣಾಮ ಬೀರುತ್ತದೆ. ಸುಮಾರು 18,000 ಜನಸಂಖ್ಯೆಯಿರುವ ಗ್ರಾಮದಲ್ಲಿ ಬಹುತೇಕರು ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿಯನ್ನು ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ಕಾರ್ಯಗತವಾಗಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ಸದಸ್ಯ ಸುಧಾಕರ್ ಗಾಯಕ್ವಾಡ್ ಹೇಳಿದ್ದಾರೆ.