ಕುಟುಂಬದ ಕೊನೆ ಬಾರಿ ಭೇಟಿಗೆ ನಿರ್ಭಯಾ ಆರೋಪಿಗಳಿಗೆ ತಿಹಾರ್ ಜೈಲಿನ ಅಧಿಕಾರಿ ಪತ್ರ
ಹೊಸದಿಲ್ಲಿ, ಫೆ. 22: ಕುಟುಂಬವನ್ನು ಕೊನೆಯ ಬಾರಿ ಯಾವಾಗ ಭೇಟಿಯಾಗುತ್ತೀರಿ ಎಂದು ಪ್ರಶ್ನಿಸಿ ತಿಹಾರ್ ಜೈಲಿನ ಅಧಿಕಾರಿಗಳು ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಎದುರು ನೋಡುತ್ತಿರುವ ಎಲ್ಲ ನಾಲ್ವರು ಆರೋಪಿಗಳಿಗೆ ಪತ್ರ ರವಾನಿಸಿದೆ.
ನಾಲ್ವರು ಆರೋಪಿಗಳಲ್ಲಿ ಮುಖೇಶ್ ಹಾಗೂ ಪವನ್, ನಾವು ಈಗಾಗಲೇ ಕುಟುಂಬವನ್ನು ಭೇಟಿಯಾಗಿದ್ದೇವೆ ಎಂದು ಹೇಳಿದ್ದಾರೆ. ಅಕ್ಷಯ, ವಿನಯ್ ಅವರಲ್ಲಿ ತಮ್ಮ ಕುಟುಂಬವನ್ನು ಯಾವಾಗ ಭೇಟಿಯಾಗುತ್ತೀರಿ ಎಂದು ಕೇಳಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯ ಭೇಟಿಯ ಸಂದರ್ಭ ಆರೋಪಿಗಳು ಕುಟುಂಬವನ್ನು ಜೈಲು ಕಂಬಿಯ ಹಿಂದಿನಿಂದ ಮಾತ್ರ ಭೇಟಿಯಾಗಲು ಅವಕಾಶ ಇರುತ್ತದೆ. ಆದರೆ, ಕೊನೆಯ ಭೇಟಿಯ ಸಂದರ್ಭ ಆರೋಪಿಗಳಿಗೆ ಕುಟುಂಬದೊಂದಿಗೆ ಮುಖಾಮುಖಿಯಾಗಲು ಅವಕಾಶ ನೀಡಲಾಗುತ್ತದೆ.
ಈ ನಡುವೆ ಮಾರ್ಚ್ 3ಕ್ಕಿಂತ ಎರಡು ದಿನಗಳಿಗಿಂತ ಮುನ್ನ ಹ್ಯಾಂಗ್ಮ್ಯಾನ್ನನ್ನು ಕಳುಹಿಸಿ ಕೊಡುವಂತೆ ಉತ್ತರಪ್ರದೇಶದ ಜೈಲಿನ ಅಧಿಕಾರಿಗಳಿಗೆ ತಿಹಾರ್ ಜೈಲು ಅಧಿಕಾರಿಗಳು ಪತ್ರ ಬರೆದಿದ್ದಾರೆ.