ನಮ್ಮನ್ನು ಪಾಕಿಸ್ತಾನಿಗಳೆಂದು ಬಿಂಬಿಸುತ್ತಿರುವುದರಿಂದ ನೋವಾಗಿದೆ
ಸುಪ್ರೀಂ ಕೋರ್ಟ್ ಗೆ ಶಾಹೀನ್ ಬಾಗ್ ಮಹಿಳೆಯರ ನಿವೇದನೆ
ಹೊಸದಿಲ್ಲಿ, ಫೆ.23: ತಮ್ಮನ್ನು ಪಾಕಿಸ್ತಾನಿಗಳಂತೆ ಬಿಂಬಿಸುತ್ತಿರುವುದು ತಮಗೆ ನೋವನ್ನುಂಟು ಮಾಡಿದೆ ಎಂದು ದಿಲ್ಲಿಯ ಶಾಹೀನ್ಬಾಗ್ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಸರ್ವೋಚ್ಚ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದಾರೆ. ಕೇಂದ್ರ ಸರಕಾರವು ತಮ್ಮ ಕಳವಳಗಳನ್ನು ತಿಳಿದುಕೊಳ್ಳಲು ತಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಮತ್ತು ವಿವಾದಾತ್ಮಕ ಸಿಎಎ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು ಎಂದು ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಅವರ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ಈ ಮಹಿಳೆಯರು ತಿಳಿಸಿದ್ದಾರೆ.
ಪ್ರತಿಭಟನೆಯು ಹೆಚ್ಚುಕಡಿಮೆ ಶಾಂತಿಯುತವಾಗಿದೆ ಮತ್ತು ತಮ್ಮ ಅಭಿಪ್ರಾಯಗಳನ್ನು ನ್ಯಾಯಾಲಯದ ಮುಂದಿರಿಸುವಂತೆ ಪ್ರತಿಭಟನಾನಿರತ ಮಹಿಳೆಯರು ತನ್ನನ್ನು ಕೋರಿಕೊಂಡಿದ್ದಾರೆ ಎಂದು ರಸ್ತೆಯನ್ನು ತೆರವುಗೊಳಿಸಿ ಪ್ರತಿಭಟನೆಯನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸುವಂತೆ ಪ್ರತಿಭಟನಾಕಾರರ ಮನವೊಲಿಸಲು ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ಸಂಧಾನಕಾರರಲ್ಲೋರ್ವರಾಗಿರುವ ಹಬೀಬುಲ್ಲಾ ಕಳೆದ ವಾರ ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೇಳಿದ್ದಾರೆ.
ತಾವು ಭಾರತದ ಹೆವ್ಮೆುಯ ಪ್ರಜೆಗಳು ಎಂದು ಪುನರುಚ್ಚರಿಸಿರುವ ಈ ಮಹಿಳೆಯರ ಕಳವಳಗಳು ಮತ್ತು ಅಭಿಪ್ರಾಯಗಳನ್ನು ಪ್ರಮಾಣಪತ್ರವು ಒಳಗೊಂಡಿದ್ದು, ತಮ್ಮನ್ನು ದೇಶವಿರೋಧಿಗಳು ಮತ್ತು ಪಾಕಿಸ್ತಾನಿಗಳೆಂದು ಹಣೆಪಟ್ಟಿ ಹಚ್ಚುತ್ತಿರುವ ಬಗ್ಗೆ ತೀವ್ರ ನೋವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ತಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳದ ಇಕ್ಕೆಲಗಳಲ್ಲಿ ಶಾಹೀನ್ಬಾಗ್ ಕಾಲನಿಯಿರುವುದು ತಮಗೆ ಅತ್ಯಂತ ಅಗತ್ಯವಾದ ಸುರಕ್ಷತೆಯನ್ನು ಒದಗಿಸಿದೆ ಮತ್ತು ಇತರ ಸ್ಥಳಗಳಿಗೆ ಹೋಲಿಸಿದರೆ ತಮ್ಮ ಮೇಲೆ ದಾಳಿಗಳು ನಡೆಯುವ ಸಾಧ್ಯತೆಯೂ ಕಡಿಮೆಯಿದೆ. ಇದೇ ಕಾರಣದಿಂದ ಪ್ರತಿಭಟನೆಗಾಗಿ ತಾವು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಮಹಿಳೆಯರು ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಹಬೀಬುಲ್ಲಾ ಅವರು ಅಫಿಡವಿಟ್ನಲ್ಲಿ ಮಹಿಳಾ ಪ್ರತಿಭಟನಾಕಾರರು ವ್ಯಕ್ತಪಡಿಸಿರುವ ಕಳವಳಗಳನ್ನು ವಿವರಿಸುವ ಜೊತೆಗೆ,ಪೊಲೀಸರು ಪ್ರತಿಭಟನೆಗೆ ಸಂಬಂಧಿಸದ ರಸ್ತೆಗಳಲ್ಲಿ ಅನಗತ್ಯವಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ ಮತ್ತು ವಾಹನ ಸಂಚಾರ ತಡೆಗಾಗಿ ಪ್ರತಿಭಟನೆಯನ್ನು ತಪ್ಪಾಗಿ ದೂರಲಾಗುತ್ತಿದೆ ಎನ್ನುವುದನ್ನು ತಾನು ವೈಯಕ್ತಿಕ ಪರಿಶೀಲನೆಯಿಂದ ಕಂಡುಕೊಂಡಿದ್ದೇನೆ ಎಂದೂ ತಿಳಿಸಿದ್ದಾರೆ.