ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಿಜೆಪಿಯ ಚಿಹ್ನೆ, 'ನೆಹರೂ ಋಣಾತ್ಮಕ ಗುಣಗಳ' ಕುರಿತು ಪ್ರಶ್ನೆಗಳು !
ವಿವಾದ ಸೃಷ್ಟಿಸಿದ ಪ್ರಶ್ನೆಪತ್ರಿಕೆ
ಇಂಫಾಲ್: ಮಣಿಪುರದ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಬಿಜೆಪಿಯ ಚಿಹ್ನೆ ಹಾಗೂ ನೆಹರೂ ಅವರ 'ಋಣಾತ್ಮಕ ಗುಣಗಳ' ಕುರಿತಾದ ಎರಡು ಪ್ರಶ್ನೆಗಳು ವಿವಾದ ಹುಟ್ಟು ಹಾಕಿವೆ. ವಿದ್ಯಾರ್ಥಿಗಳಲ್ಲಿ ಒಂದು ನಿರ್ದಿಷ್ಟ ಮನಸ್ಥಿತಿ ಮೂಡಿಸುವ ಯತ್ನ ಇದೆಂದು ಕಾಂಗ್ರೆಸ್ ಸಹಿತ ಇತರ ವಿಪಕ್ಷಗಳು ದೂರಿವೆ.
ಮಣಿಪುರದ ಹಿರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸುವ ಈ ಪರೀಕ್ಷೆಯ ರಾಜ್ಯಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿನ ಈ ಎರಡು ಪ್ರಶ್ನೆಗಳು ಸಾಕಷ್ಟು ಜನರ ಹುಬ್ಬೇರಿಸಿದೆ.
ಮೂವತ್ತೆರಡನೇ ಪ್ರಶ್ನೆ ವಿದ್ಯಾರ್ಥಿಗಳಿಗೆ ಬಿಜೆಪಿಯ ಚುನಾವಣಾ ಚಿಹ್ನೆ ರಚಿಸುವಂತೆ ಹೇಳಿದರೆ ಇನ್ನೊಂದು ಪ್ರಶ್ನೆ``ರಾಷ್ಟ್ರ ನಿರ್ಮಾಣ ವಿಚಾರದಲ್ಲಿ ನೆಹರೂ ಅವರ ಯಾವುದಾದರೂ ನಾಲ್ಕು ಋಣಾತ್ಮಕ ಗುಣಲಕ್ಷಣಗಳನ್ನು'' ಗುರುತಿಸುವಂತೆ ಇನ್ನೊಂದು ಪ್ರಶ್ನೆ ಹೇಳಿದೆ.
ಈ ಎರಡೂ ಪ್ರಶ್ನೆಗಳು ಪ್ರಸ್ತುತವಾಗಿವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ನಿಂಬಸ್ ಸಿಂಗ್ ಹೇಳಿದರೆ, ಕಾಂಗ್ರೆಸ್ ವಕ್ತಾರ ಕೆ ಎಚ್ ಜಯ್ ಕಿಶನ್ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಮನೋಭಾವನೆ ಹೊಂದುವಂತೆ ಮಾಡುವುದು ಈ ಪ್ರಶ್ನೆಗಳ ಯತ್ನವಾಗಿದೆ ಎಂದು ಹೇಳಿದ್ದಾರೆ.
ಎರಡು ಪ್ರಶ್ನೆಗಳಲ್ಲಿ ಯಾವೊಂದು ಪ್ರಶ್ನೆಯೂ ಪಠ್ಯಕ್ರಮಕ್ಕಿಂತ ಹೊರಗಿನ ಪ್ರಶ್ನೆಯಲ್ಲ ಎಂದು ರಾಜ್ಯ ಶಿಕ್ಷಣ ಮಂಡಳಿ ಅಧ್ಯಕ್ಷ ಎಲ್ ಮಹೇಂದ್ರ ಸಿಂಗ್ ಹೇಳಿದ್ದಾರೆ.