ಜಾಮಿಯಾ ಹಿಂಸಾಚಾರ ಕುರಿತ ಟ್ವೀಟ್: ಪೊಲೀಸರಿಂದ ಮನೀಶ್ ಸಿಸೋಡಿಯಾಗೆ ಕ್ಲೀನ್ ಚಿಟ್
ಹೊಸದಿಲ್ಲಿ, ಫೆ. 24: ಡಿಸೆಂಬರ್ 15ರ ಜಾಮಿಯಾ ಹಿಂಸಾಚಾರದ ಸಂದರ್ಭ ದಾರಿ ತಪ್ಪಿಸುವ ಟ್ವೀಟ್ ಪೋಸ್ಟ್ ಮಾಡಿದ ಆರೋಪಕ್ಕೆ ಒಳಗಾದ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದಿಲ್ಲಿ ಪೊಲೀಸರು ಸೋಮವಾರ ಕ್ಲೀನ್ ಚಿಟ್ ನೀಡಿದ್ದಾರೆ.
ದೂರು ಪರಿಶೀಲಿಸಿದಾಗ ಮನೀಶ್ ಸಿಸೋಡಿಯಾ ಅವರ ಟ್ವೀಟ್ನಲ್ಲಿ ಪೊಲೀಸರ ವಿರುದ್ಧ ಆರೋಪ ಹಾಗೂ ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿದುಬಂದಿದೆ. ಸುದ್ದಿವಾಹಿನಿಯಲ್ಲಿ ಪ್ರಸಾರವಾದ ವೀಡಿಯೊ ತುಣುಕಿನಲ್ಲಿ ಮನೀಶ್ ಸಿಸೋಡಿಯಾ ಅವರು ಕೇವಲ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ. ಸಿಸೋಡಿಯಾ ಅವರ ಟ್ವೀಟ್ನ ಅಂಶಗಳಲ್ಲಿ ಪರಿಗಣಿಸಬಹುದಾದ ಯಾವುದೇ ತಪ್ಪು ಮಾಡಿರುವುದು ಕಂಡು ಬಂದಿಲ್ಲ ಎಂದು ‘ಕ್ರಮ ಕೈಗೊಂಡ ವರದಿ’ಯಲ್ಲಿ ಪೊಲೀಸರು ತಿಳಿಸಿದ್ದಾರೆ.
ದಾರಿ ತಪ್ಪಿಸುವ ಟ್ವೀಟ್ಗಳನ್ನು ಮಾಡಿದ ಮನೀಶ್ ಸಿಸೋಡಿಯಾ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ವಕೀಲರೊಬ್ಬರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ‘ಕ್ರಮ ಕೈಗೊಂಡ ವರದಿ’ ಸಲ್ಲಿಸುವಂತೆ ಪೊಲೀಸರಿಗೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ವಿಶಾಲ್ ಪೂಜಾ ಈ ತಿಂಗಳ ಆರಂಭದಲ್ಲಿ ಸೂಚಿಸಿದ್ದರು. ದಿಲ್ಲಿಯ ಜಾಮಿಯಾ ನಗರದಲ್ಲಿ ಡಿಸೆಂಬರ್ 15ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭ ಹಲವು ಬಸ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆ ಬಳಿಕ ಮನೀಶ್ ಸಿಸೋಡಿಯಾ ಅವರು ಟ್ವೀಟ್ ಮಾಡಿದ್ದರು.