ಈ ರಾಜ್ಯಕ್ಕೆ ನೆರೆರಾಜ್ಯಗಳ ಬಿಡಾಡಿ ದನಗಳ ಸಮಸ್ಯೆ
ಸಾಂದರ್ಭಿಕ ಚಿತ್ರ
ಲಕ್ನೋ : ಉತ್ತರ ಪ್ರದೇಶದಲ್ಲಿ ಬಿಡಾಡಿ ದನಗಳ ಸಮಸ್ಯೆ ವಿಚಿತ್ರ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಆಡಳಿತದ ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ಬಿಡಾಡಿ ದನಗಳನ್ನು ಉತ್ತರ ಪ್ರದೇಶಕ್ಕೆ ಸಾಗಹಾಕಲಾಗುತ್ತಿದೆ ಎಂದು ಉತ್ತರ ಪ್ರದೇಶ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶ್ ಖನ್ನಾ ಆಪಾದಿಸಿದ್ದಾರೆ. ಗಡಿಭಾಗದಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶ ಹಾಗೂ ರಾಜಸ್ತಾನದಿಂದ ಬರುವ ಬಿಡಾಡಿ ದನಗಳ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಕಾಂಗ್ರೆಸ್ ಶಾಸಕ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲೂ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಬಿಡಾಡಿ ಹಸುಗಳು ರೈತರ ಬೆಳೆಗಳಿಗೆ ಹಾನಿ ಮಾಡುತ್ತಿರುವುದನ್ನು ತಡೆಯಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದ್ದರು. "ರೈತರಿಗೆ ತಮ್ಮ ಹೊಲಗಳನ್ನು ಕಾಯದೇ ಬೇರೆ ಮಾರ್ಗವಿಲ್ಲ. ಹಲವು ಕಡೆಗಳಲ್ಲಿ ಬಿಡಾಡಿ ಹಸುಗಳು ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ" ಎಂದು ಅವರು ವಿವರಿಸಿದ್ದಾರೆ.
ಜಾನುವಾರು ದೊಡ್ಡಿಗಳನ್ನು ನಿರ್ಮಿಸುವುದು ಸೇರಿದಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಉತ್ತರಿಸಿದರು. ಇದರ ಜತೆಗೆ ಈ ಬಿಡಾಡಿ ಹಸುಗಳು ಎಲ್ಲಿಂದ ಬರುತ್ತಿವೆ ಎಂಬ ಬಗ್ಗೆಯೂ ಗಮನ ಹರಿಸಬೇಕು. ಮಧ್ಯಪ್ರದೇಶ ಹಾಗೂ ರಾಜಸ್ತಾನದ ಗಡಿಭಾಗದಲ್ಲಿ ಬಿಡಾಡಿ ದನಗಳನ್ನು ಬಿಟ್ಟುಹೋಗುತ್ತಿದ್ದು, ಅವು ರಾಜ್ಯಕ್ಕೆ ಪ್ರವೇಶಿಸುತ್ತಿವೆ ಎಂದು ಅವರು ಹೇಳಿದರು.