ಸಿಎಎ ವಿರೋಧಿಸಿ ಆರ್ಟಿಐ ಕಾರ್ಯಕರ್ತ ಅಖಿಲ್ ಗೊಗೋಯಿಯಿಂದ ಜೈಲಿನಲ್ಲಿ ಉಪವಾಸ ಮುಷ್ಕರ
ಗುವಾಹಟಿ, ಫೆ. 25: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾರ್ಚ್ 1ರಿಂದ ನಾವು ಜೈಲಿನಲ್ಲಿ ಉಪವಾಸ ಮುಷ್ಕರ ಆರಂಭಿಸಲಿದ್ದೇವೆ ಎಂದು ಅಸ್ಸಾಂನ ಆರ್ಟಿಐ ಕಾರ್ಯಕರ್ತ ಹಾಗೂ ರೈತ ಸಂಘಟನೆ ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿ (ಕೆಎಂಎಸ್ಎಸ್)ಯ ಅಖಿಲ್ ಗೊಗೋಯಿ ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಗೊಗೋಯಿ, ತಾನು ಹಾಗೂ ತನ್ನೊಂದಿಗೆ ಬಂಧಿತರಾಗಿರುವ ಕೆಎಂಎಂಎಸ್ ನಾಯಕರು ಜೈಲಿನ ಆವರಣದಲ್ಲಿ ಮಾರ್ಚ್ 1ರಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಲಿದ್ದೇವೆ ಎಂದಿದ್ದಾರೆ. ಈ ಸಂದರ್ಭ ನ್ಯಾಯಾಲಯದ ಸಂಕೀರ್ಣದ ಹೊರಗೆ ಸಭೆ ಸೇರಿದ ಬೆಂಬಲಿಗರು ಗೊಗೋಯಿ ಹಾಗೂ ಇತರರನ್ನು ಬಿಡುಗಡೆ ಮಾಡುವಂತೆ ಘೋಷಣೆಗಳನ್ನು ಕೂಗಿದರು. ಗೊಗೋಯಿ ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ತರುವಾಯ ಸಿಪಿಐ (ಮಾವೋವಾದಿ)ಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ನಂಟಿನ ಹಿನ್ನೆಲೆಯಲ್ಲಿ ಈ ಹಿಂದೆ ಗುವಾಹತಿಯ ಚಂಡಮಾರಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಗುವಾಹತಿ ಐಐಟಿಯ ಪ್ರೊ. ಅರುಪ್ಜ್ಯೋತಿ ಸಾಕಿಯಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹಲವು ಬಾರಿ ವಿಚಾರಣೆಗೆ ಒಳಪಡಿಸಿತ್ತು.