ಪುಲ್ವಾಮ ದಾಳಿ :ಆರೋಪಿಗೆ ಜಾಮೀನು
ಚಾರ್ಜ್ ಶೀಟ್ ಸಲ್ಲಿಸಲು ಎನ್ ಐಎ ವಿಫಲ
ಫೈಲ್ ಚಿತ್ರ
ಹೊಸದಿಲ್ಲಿ, ಫೆ. 27: ರಾಷ್ಟ್ರೀಯ ತನಿಖಾ ಸಂಸ್ಥೆ ನಿಗದಿತ ಕಾಲಾವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಪುಲ್ವಾಮ ದಾಳಿ ಪ್ರಕರಣದ ಆರೋಪಿಗೆ ದಿಲ್ಲಿಯ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ದಿಲ್ಲಿಯ ಪಟಿಯಾಲ ಹೌಸ್ ನ್ಯಾಯಾಲಯ ಆರೋಪಿ ಯೂಸುಫ್ ಚೋಪನ್ಗೆ ಜಾಮೀನು ನೀಡಿ 2020 ಫೆಬ್ರವರಿ 18ರಂದು ಆದೇಶ ನೀಡಿದೆ. ಯೂಸುಫ್ ಚೋಪನ್ ಸುಮಾರು 180 ದಿನಗಳ ಕಾಲ ಕಸ್ಟಡಿಯಲ್ಲಿದ್ದ. ನಿಗದಿಪಡಿಸಿದ ಸಮಯ ಮಿತಿ ಒಳಗಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪ ಪಟ್ಟಿ ಸಲ್ಲಿಸಿಲ್ಲ. ಈ ನೆಲೆಯಲ್ಲಿ ಯೂಸಫ್ ಚೋಪನ್ ಜಾಮೀನು ಮನವಿ ಸಲ್ಲಿಸಿದ್ದ. ಚೋಪನ್ ಕುರಿತ ತನಿಖೆಯ ಸಮಯ ಮಿತಿ 2020 ಫೆಬ್ರವರಿ 11ರಂದು ಅಂತ್ಯಗೊಂಡಿದೆ ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಒಪ್ಪಿಕೊಂಡಿದೆ. ಅಲ್ಲದೆ, ಸಾಕಷ್ಟು ಪುರಾವೆಗಳು ಇಲ್ಲದೇ ಇರುವುದರಿಂದ ಅದು ಯಾವುದೇ ಆರೋಪ ಪಟ್ಟಿ ಸಲ್ಲಿಸಿಲ್ಲ.
ಆರೋಪಿಯ ವಾದವನ್ನು ನ್ಯಾಯಮೂರ್ತಿ ಪ್ರವೀಣ್ ಸಿಂಗ್ ಒಪ್ಪಿಕೊಂಡರು ಹಾಗೂ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಯೂಸುಫ್ ಚೋಪನ್ಗೆ ಜಾಮೀನು ನೀಡಿದರು. ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸಹಕರಿಸುವಂತೆ ಹಾಗೂ ಅಗತ್ಯ ಇರುವಾಗ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅವರು ನಿರ್ದೇಶಿಸಿದರು.