ದಿಲ್ಲಿ ಪೊಲೀಸರ ಹಲ್ಲೆಯಿಂದ ಲಾಕಪ್ ನಲ್ಲಿ ಯುವಕ ಮೃತ್ಯು: ಕುಟುಂಬಸ್ಥರ ಆರೋಪ
ಹೊಸದಿಲ್ಲಿ, ಫೆ. 28: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಪೊಲೀಸರು ಯುವಕರಿಗೆ ಹಲ್ಲೆ ನಡೆಸುತ್ತಿರುವ ವೀಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ಇದ್ದ 23 ವರ್ಷದ ಫೈಝಾನ್ ಮೃತಪಟ್ಟಿದ್ದಾರೆ. ಲಾಕಪ್ನಲ್ಲಿ ಪೊಲೀಸರ ಹಲ್ಲೆಯಿಂದ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ನಾಲ್ವರು ಯುವಕರು ರಕ್ತಸಿಕ್ತರಾಗಿ ಮಾರ್ಗದಲ್ಲಿ ಬಿದ್ದುಕೊಂಡಿರುವುದು. ಪೊಲೀಸ್ ಸಮವಸ್ತ್ರ ಧರಿಸಿದ ನಾಲ್ವರು ವ್ಯಕ್ತಿಗಳು ಅವರಿಗೆ ಲಾಠಿಯಿಂದ ಥಳಿಸುತ್ತಿರುವುದು. ನಿಮಗೆ ಆಝಾದಿ ಬೇಕೇ? ಎಂದು ಕೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇವರಲ್ಲಿ ಕ್ರೂರವಾಗಿ ಹಲ್ಲೆಗೊಳಗಾದ ಓರ್ವ ರಾಷ್ಟ್ರಗೀತೆ ಹಾಡುತ್ತಿರುವುದು, ಕೆಲವರು ಕ್ಷಮಿಸುವಂತೆ ಮನವಿ ಮಾಡುತ್ತಿರುವುದು ಕಂಡು ಬಂದಿತ್ತು. ಇವರಲ್ಲಿ ನಿಶ್ಚಲನಾಗಿ ಬಿದ್ದುಕೊಂಡಿದ್ದ ಪೈಝಾನ್ ಶುಕ್ರವಾರ ಮೃತಪಟ್ಟಿದ್ದಾನೆ. ಇದ್ದಕ್ಕಿದ್ದಂತೆ ಅಶ್ರುವಾಯು ಸೆಲ್ಗಳನ್ನು ಸಿಡಿಸಲಾಯಿತು. ಇದರಿಂದ ಯುವಕರಿಗೆ ಅಲ್ಲಿಂದ ಒಂದು ಹೆಜ್ಜೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಕೂಡಲೇ ಪೊಲೀಸರು ಸುತ್ತುವರಿದೆ ಅವರಿಗೆ ಅಮಾವೀಯವಾಗಿ ಥಳಿಸಿರುವುದು. ಇದು ವೀಡಿಯೊದಲ್ಲಿ ದಾಖಲಾಗಿದೆ ಎಂದು ಫೈಝಾನ್ನ ಹಿರಿಯ ಸಹೋದರ ನಯೀಮ್ ಹೇಳಿದ್ದಾರೆ.
ಗಂಭೀರ ಗಾಯಗೊಂಡಿದ್ದ ಅವರನ್ನು ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಾಮಕಾವಸ್ತೆಗೆ ಮಾತ್ರ ಅವರಿಗೆ ಚಿಕಿತ್ಸೆ ನೀಡಲಾಯಿತು. ಅನಂತರ ಜ್ಯೋತಿ ನಗರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಎರಡು ದಿನ ಇರಿಸಲಾಯಿತು. ನನ್ನ ಸಹೋದರ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ನಯೀಮ್ ಆರೋಪಿಸಿದ್ದಾರೆ.