ಸಿಖ್ಖರೊಂದಿಗಿನ ಸಹರಾಣ್ ಪುರ ಭೂ ವಿವಾದ ಕೊನೆಗೊಳಿಸಿದ ಮುಸ್ಲಿಮರು
ದೆಹಲಿ ಹಿಂಸಾಕಾಂಡದಲ್ಲಿ ಮಾಡಿದ ಉಪಕಾರಕ್ಕೆ ಪ್ರತಿಸ್ಪಂದನೆ
ಫೋಟೊ : thequint
ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಸಹರಾಣ್ ಪುರದಲ್ಲಿ ಸಿಖ್ಖರು ಮತ್ತು ಮುಸ್ಲಿಮರ ನಡುವೆ ಹತ್ತು ವರ್ಷಗಳಿಂದ ಇದ್ದ ಭೂ ವಿವಾದ ಕೊನೆಗೊಂಡಿದೆ.
ಸಹರಾಣ್ ಪುರ ರೈಲು ನಿಲ್ದಾಣದಿಂದ ಅನತಿ ದೂರದಲ್ಲಿರುವ ಗುರುದ್ವಾರಕ್ಕೆ ಹೊಂದಿಕೊಂಡಿರುವ ಜಮೀನಿಗೆ ಸಂಬಂಧಿಸಿದಂತೆ ಈ ವಿವಾದ ಹತ್ತು ವರ್ಷಗಳಿಂದ ನಡೆದುಬಂದಿತ್ತು. ಗುರುದ್ವಾರ ಸಂಕೀರ್ಣವನ್ನು ವಿಸ್ತರಿಸುವ ಸಲುವಾಗಿ ಗುರುದ್ವಾರ ಸಮಿತಿ ಜಮೀನು ಖರೀದಿಸಿತ್ತು. ಆ ಸ್ಥಳದಲ್ಲಿದ್ದ ಹಳೆಯ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. ಇದರಲ್ಲಿ ಹಳೆಯ ಮಸೀದಿಯೊಂದಿತ್ತು ಎನ್ನಲಾಗಿದೆ.
ಕೊನೆಗೆ ಈ ವಿವಾದ ಸುಪ್ರೀಂಕೋರ್ಟ್ ತಲುಪಿತು. ಅದರೆ ಇದೀಗ ಮುಸ್ಲಿಮರು ತಮ್ಮ ಕ್ಲೆಮ್ ಬಿಟ್ಟುಬಿಟ್ಟಿದ್ದಾರೆ ಹಾಗೂ ಸಿಖ್ಖರು ಮುಸ್ಲಿಮರಿಗೆ ಪರ್ಯಾಯ ಜಾಗವನ್ನು ನೀಡಿದ್ದಾರೆ. ಅದರೆ ಈಶಾನ್ಯ ದೆಹಲಿ ಹಿಂಸಾಚಾರದ ವೇಳೆ ನೀಡಿದ ಸಹಕಾರಕ್ಕೆ ಪ್ರತಿಯಾಗಿ ಈ ಜಾಗವನ್ನು ಕೂಡಾ ಮುಸ್ಲಿಮರು ಪಡೆಯದೇ ಮಾನವೀಯತೆ ಮೆರೆದಿದ್ದಾರೆ.
"ದೆಹಲಿಯಲ್ಲಿ ನಡೆದ ಪ್ರತಿಭಟನೆಯುದ್ದಕ್ಕೂ ಸಿಖ್ಖರು ನೀಡಿದ ನೆರವಿನ ಹಿನ್ನೆಲೆಯಲ್ಲಿ, ಸಹರಾಣ್ ಪುರ ಮಸೀದಿ ಸಮಿತಿಯು ಕೃತಜ್ಞತಾಪೂರ್ವಕ ಕ್ರಮವಾಗಿ ವಿವಾದಿತ ಜಾಗದ ಮೇಲಿನ ಕ್ಲೇಮ್ ಬಿಟ್ಟುಬಿಟ್ಟಿದೆ" ಎಂದು ಸುಪ್ರೀಂಕೋರ್ಟ್ಗೆ ತಿಳಿಸಿದೆ.