ನಿವೃತ್ತ ಪೊಲೀಸ್ ಅಧಿಕಾರಿಯನ್ನು ಕೊಲೆಗೈದು ಮೃತದೇಹದ ಜೊತೆ ಸೆಲ್ಫಿ !
ಹೈದರಾಬಾದ್: ನಿವೃತ್ತ ಎಸ್ಐ ಆಗಿರುವ ತನ್ನ ಸೋದರಮಾವನನ್ನು ಕೊಂದ ಯುವಕನೊಬ್ಬ ನಂತರ ಮಾವನ ರಕ್ತಸಿಕ್ತ ದೇಹದ ಜತೆ ಸೆಲ್ಫಿ ತೆಗೆದ ಘಟನೆ ತೆಲಂಗಾಣದ ಉತ್ನೂರ್ ಎಂಬಲ್ಲಿನ ಗಂಗನ್ನಪೇಟ್ ಗ್ರಾಮದಲ್ಲಿ ನಡೆದಿದೆ.
ಶಿವರಾಜ್ ಎಂಬ 62 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಮಾರ್ಚ್ 6ರಂದು ಹತ್ಯೆಗೈಯ್ಯಲಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಿದ್ದ ಪೊಲೀಸರು ವಿವೇಕ್ ಸಹಿತ ಮೂವರನ್ನು ಬಂಧಿಸಿದ್ದರು. ವಿವೇಕ್ ಕೊಲೆಗೀಡಾದ ವ್ಯಕ್ತಿಯ ಸೋದರಳಿಯನಾಗಿದ್ದ. ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದ ವಿವೇಕ್ ತಂದೆ ಜಯರಾಜ್ ಗೂ ಕೊಲೆಗೀಡಾದ ಶಿವರಾಜ್ ಗೂ ನಡುವೆ ಆಸ್ತಿ ವಿಚಾರದಲ್ಲಿ ತಕರಾರಿತ್ತು.
ಮಾರ್ಚ್ 6ರಂದು ವಿವೇಕ್ ಮತ್ತು ಶಿವರಾಜ್ ಪ್ರಾರ್ಥನಾ ಮಂದಿರದಲ್ಲಿ ಭೇಟಿಯಾದಾಗ ಜಗಳ ನಡೆದು ವಿವೇಕ್ ಶಿವರಾಜ್ ಮೇಲೆ ದಾಳಿ ನಡೆಸಿದ್ದು ಆತ ಸ್ಥಳದಲ್ಲಿಯೇ ಕುಸಿದು ಸಾವನ್ನಪ್ಪಿದ್ದರು.
ಆರೋಪಿಯನ್ನು ಬಂಧಿಸಿದ ಮರುದಿನ ಆತ ಕೊಲೆಗೈದ ತನ್ನ ಸೋದರಮಾವನ ರಕ್ತಸಿಕ್ತ ದೇಹದ ಜತೆ ತೆಗೆದ ಸೆಲ್ಫಿ ವೈರಲ್ ಆಗಿತ್ತು.