'ಸಿಂದಿಯಾ ಜೊತೆ ಹೋಗಲ್ಲ, ಬಿಜೆಪಿ ಸೇರಲ್ಲ ಎಂದು ಹೇಳಿದ್ದಾರೆ'
ರೆಸಾರ್ಟ್ ನಲ್ಲಿರುವ ಶಾಸಕರನ್ನು ಭೇಟಿಯಾಗಿ ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್
ಭೋಪಾಲ್: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಹಾಗೂ ಬೆಂಗಳೂರಿನ ರೆಸಾರ್ಟ್ ನಲ್ಲಿರುವ ಮಧ್ಯಪ್ರದೇಶದ 19 ಮಂದಿ ಶಾಸಕರನ್ನು ಬುಧವಾರ ಭೇಟಿಯಾಗಿರುವ ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮ ಕುತೂಹಲಕಾರಿ ಮಾಹಿತಿ ಹೊರಗೆಡಹಿದ್ದಾರೆ.
"ಅವರ್ಯಾರಿಗೂ ಸಿಂದಿಯಾ ಜಿ ಜತೆ ಹೋಗಲು ಸಿದ್ಧರಿಲ್ಲ. ತಮ್ಮನ್ನು ತಪ್ಪು ದಾರಿಗೆಳೆದು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ಅವರು ಹೇಳಿದ್ದಾರೆ ಹಾಗೂ ಅವರಲ್ಲಿ ಹೆಚ್ಚಿನವರು ತಾವು ಬಿಜೆಪಿ ಸೇರಲು ಸಿದ್ಧರಿಲ್ಲವೆಂದು ಹೇಳಿದ್ದಾರೆ'' ಎಂದು ವರ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ನಾನು ಈಗಷ್ಟೇ ಬೆಂಗಳೂರಿನಿಂದ ವಾಪಸಾಗಿದ್ದೇನೆ, ಈಗ ಜೈಪುರ್ ಗೆ ಹೋಗುತ್ತಿದ್ದೇನೆ. ಅವರೆಲ್ಲರೂ ತಮ್ಮ ರಕ್ತದಲ್ಲಿ ಕಾಂಗ್ರೆಸ್ ಇದೆ ಪಕ್ಷದಲ್ಲಿಯೇ ಉಳಿಯುವುದಾಗಿ ಹೇಳುತ್ತಿದ್ದಾರೆ. ಸಿಂದಿಯಾ ಅವರು ಹಿರಿಯ ನಾಯಕರಾಗಿದ್ದರಿಂದ ಅವರಿಗೆ ಮನ್ನಣೆ ನೀಡಿ ಅವರ ಆದೇಶವನ್ನು ಶಾಸಕರು ಪಾಲಿಸಿದ್ದಾರೆ'' ಎಂದು ವರ್ಮ ಹೇಳಿದರು.
ಬಿಜೆಪಿ ಹಣ ಬಲ ಬಳಸಿ ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತಿದೆ ಎಂದು ಆರೋಪಿಸಿದ ಅವರು ತಾವು 7ರಿಂದ 8 ಬಿಜೆಪಿ ಶಾಸಕರ ಜತೆ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.