ಸಿದ್ಧಾಂತ ತ್ಯಜಿಸಿದ ಸಿಂಧಿಯಾ: ರಾಹುಲ್ ಟೀಕೆ
ಹೊಸದಿಲ್ಲಿ,ಮಾ.12: ತನ್ನ ನಿಕಟವರ್ತಿ ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿಗೆ ಪಕ್ಷಾಂತರ ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದ್ದು, ತನ್ನ ರಾಜಕೀಯ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರಿಂದ ಅವರು ಸಿದ್ಧಾಂತವನ್ನು ತೊರೆದು ಬಿಜೆಪಿ ಸೇರಿದ್ದಾರೆಂದು ಟೀಕಿಸಿದ್ದಾರೆ.
‘‘ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಾತಿಗೂ ಮತ್ತು ಅವರ ಹೃದಯಾಂತರಾಳಕ್ಕೂ ಬಹಳ ವ್ಯತ್ಯಾಸವಿದೆ’’ ಎಂದು ರಾಹುಲ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಸಿಂಧಿಯಾ ಹಾಗೂ ತನಗೆ ಕಾಲೇಜು ದಿನಗಳಿಂದಲೇ ಪರಸ್ಪರ ಪರಿಚಯವಿದ್ದುದಾಗಿ ಹೇಳಿದರು
ಬಿಜೆಪಿಗೆ ಜ್ಯೋತಿರಾದಿತ್ಯ ಪಕ್ಷಾಂತರದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, ಇದೊಂದು ಸಿದ್ಧಾಂತಗಳ ಘರ್ಷಣೆ ಎಂದರು. ‘‘ಕಾಂಗ್ರೆಸ್ ಒಂದೆಡೆಯಾದರೆ, ಬಿಜೆಪಿ-ಆರೆಸ್ಸೆಸ್ ಇನ್ನೊಂದೆಡೆ. ಕಾಲೇಜು ದಿನಗಳಿಂದಲೇ ಅವರು ನನ್ನ ಜೊತೆಗಿದ್ದರು. ನಾನವರನ್ನು ಚೆನ್ನಾಗಿ ಬಲ್ಲೆ. ಅವರಿಗೆ ತನ್ನ ರಾಜಕೀಯ ಭವಿಷ್ಯದ ಬಗ್ಗೆ ತೀವ್ರ ಆತಂಕವಿತ್ತು. ಇದಕ್ಕಾಗಿ ಅವರು ತನ್ನ ಸಿದ್ಧಾಂತವನ್ನು ಜೇಬಲ್ಲಿರಿಸಿಕೊಂಡು, ಆರೆಸ್ಸೆಸ್ ನೊಂದಿಗೆ ಹೋಗಿದ್ದಾರೆ’’ ಎಂದು ರಾಹುಲ್ ಕಟಕಿಯಾಡಿದರು.
ವಾಸ್ತವವೇನೆಂದರೆ ಅವರಿಗೆ ಅಲ್ಲಿಯೂ ಗೌರವ ದೊರೆಯಲಾರದ ಮತ್ತು ಹೃದಯದ ಭಾವನೆಗಳಿಗೂ ಸಂತೃಪ್ತಿ ದೊರೆಯದು ಎಂದು ರಾಹುಲ್ ಅಭಿಪ್ರಾಯಿಸಿದರು.