ಹಲವು ಕೊರೊನಾವೈರಸ್ ರೋಗಿಗಳನ್ನು ಸಾಯಲು ಬಿಡುತ್ತಿರುವ ಇಟಲಿ!
ಕಾರಣವೇನು ಗೊತ್ತಾ?
ಹೊಸದಿಲ್ಲಿ,ಮಾ.16: ಚೀನಾದ ನಂತರ ಅತ್ಯಂತ ಹೆಚ್ಚಿನ ಕೊರೋನವೈರಸ್ ಸಾವುಗಳಿಗೆ ಇಟಲಿ ಸಾಕ್ಷಿಯಾಗಿದೆ. ಹೆಚ್ಚುತ್ತಿರುವ ಸಾವುಗಳ ನಡುವೆಯೇ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸರಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಹೇರಿದೆ. ಆದರೆ ವೈದ್ಯಕೀಯ ಪೂರೈಕೆಗಳು ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯು ಯಾವ ಕೊರೋನವೈರಸ್ ರೋಗಿಗಳನ್ನು ಬದುಕಿಸಬೇಕು ಎಂದು ಆಯ್ಕೆ ಮಾಡುವುದನ್ನು ವೈದ್ಯರಿಗೆ ಅನಿವಾರ್ಯವಾಗಿಸಿದೆ.
ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುವವರು,ಉದಾಹರಣೆಗೆ ಯುವಜನತೆಗೆ ಆದ್ಯತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಬದುಕುಳಿಯುವ ಸಾಧ್ಯತೆ ಕಡಿಮೆಯಿರುವವರಿಗೆ ಜೀವರಕ್ಷಕ ವೈದ್ಯಕೀಯ ಸೇವೆಯನ್ನು ನಿರಾಕರಿಸಲಾಗುತ್ತಿದೆ.
‘ದಿ ಲ್ಯಾನ್ಸೆಟ್ ಫ್ರೈಡೇ’ ವೈದ್ಯಕೀಯ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ‘ಕೋವಿಡೆ -19 ಆ್ಯಂಡ್ ಇಟಲಿ:ವಾಟ್ ನೆಕ್ಸ್ಟ್?’ಶೀರ್ಷಿಕೆಯ ತಮ್ಮ ಅಧ್ಯಯನ ವರದಿಯಲ್ಲಿ ಸಂಶೋಧಕರಾದ ಆ್ಯಂಡಿಯಾ ರೆಮುಝ್ಝಿ ಮತ್ತು ಗಿಸೆಪ್ಪಿ ರೆಮುಝ್ಝಿ ಅವರು ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಸೋಂಕಿತ ವ್ಯಕ್ತಿಗಳ ಪ್ರಮಾಣದಲ್ಲಿ ಏರಿಕೆಯು ಇದೇ ರೀತಿಯಲ್ಲಿ ಮುಂದುವರಿದರೆ ಇನ್ನೊಂದು ವಾರದಲ್ಲಿ 30,000ಕ್ಕೂ ಅಧಿಕ ಜನರು ಸೋಂಕಿಗೆ ಗುರಿಯಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತರರನ್ನು ಉಳಿಸಲು ಕೆಲವು ರೋಗಿಗಳನ್ನು ಸಾಯಲು ಬಿಡುವ ವೈದ್ಯರ ಪ್ರವೃತ್ತಿಯನ್ನು ಟೀಕಿಸಿರುವ ಇಟಾಲಿಯನ್ ಜೈವಿಕ ನೀತಿ ಸಮಿತಿಯ ಅಧ್ಯಕ್ಷರು,ಸಂವಿಧಾನವು ಎಲ್ಲ ಅಗತ್ಯ ವೈದ್ಯಕೀಯ ನೆರವನ್ನು ಪಡೆಯುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಿದೆ ಎಂದು ಹೇಳಿದ್ದಾರೆ. ಇದನ್ನು ತಮ್ಮ ಅಧ್ಯಯನ ವರದಿಯಲ್ಲಿ ಪ್ರಸ್ತಾಪಿಸಿರುವ ಸಂಶೋಧಕರು,ಕೆಲವು ಟೀಕಾಕಾರರು ಐಸಿಯುಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ ಮತ್ತು ಕೋವಿದ್-19 ಮಾರಣಾಂತಿಕ ಕಾಯಿಲೆಯಾಗಿದೆ ಎಂಬ ವಾಸ್ತವವನ್ನು ಅರಿತಿಲ್ಲದಿರಬಹುದು ಎಂದಿದ್ದಾರೆ.
1,400ಕ್ಕೂ ಅಧಿಕ ಜೀವಗಳು ಈಗಾಗಲೇ ಬಲಿಯಾಗಿರುವ ಐರೋಪ್ಯ ರಾಷ್ಟ್ರ ಇಟಲಿಯಲ್ಲಿ ಸೋಂಕು ಹರಡುವಿಕೆ ಈಗಿನ ಪ್ರಮಾಣದಲ್ಲಿಯೇ ಇನ್ನೊಂದು ವಾರ ಕಾಲ ಮುಂದುವರಿದರೆ ದೇಶವು ಅತ್ಯಂತ ಭೀಕರ ಸ್ಥಿತಿಗೆ ಸಿಲುಕಲಿದೆ ಎಂದು ಸಂಶೋಧಕರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ 21,000ಕ್ಕೂ ಅಧಿಕ ಜನರಲ್ಲಿ ಕರೋನವೈರಸ್ ಸೋಂಕು ಪತ್ತೆಯಾಗಿದ್ದು,ಈ ಸಾಂಕ್ರಾಮಿಕ ಪಿಡುಗಿನ ಕೇಂದ್ರಬಿಂದುವೀಗ ಚೀನಾದಿಂದ ಇಟಲಿಗೆ ಸ್ಥಳಾಂತರಗೊಂಡಿದೆ.
ಪಿಡುಗನ್ನು ಎದುರಿಸಲು ಎಪ್ರಿಲ್ ಮಧ್ಯದ ವೇಳೆಗೆ ಇಟಲಿಗೆ ಹೊಸದಾಗಿ 4,000 ತೀವ್ರ ನಿಗಾ ಘಟಕ (ಐಸಿಯು)ಗಳು ಅಗತ್ಯವಾಗಬಹುದು ಎಂದಿರುವ ಸಂಶೋಧಕರು,ಮಾ.1ರಿಂದ ಮಾ.11ರ ನಡುವೆ ಪ್ರತಿದಿನ ದೇಶದಲ್ಲಿಯ ಶೇ.9ರಿಂದ ಶೇ.11ರಷ್ಟು ರೋಗಿಗಳಿಗೆ ಐಸಿಯು ಚಿಕಿತ್ಸೆ ಅಗತ್ಯವಾಗಿತ್ತು ಎಂದು ಬೆಟ್ಟು ಮಾಡಿದ್ದಾರೆ. ಒಂದು ಅಂದಾಜಿನಂತೆ ಇಟಲಿಯಲ್ಲಿ ಹಾಲಿ 5,200 ಐಸಿಯುಗಳಿವೆ.
“ಕಠಿಣ ಶತ್ರುವಿನ ವಿರುದ್ಧದ ಅನಿರೀಕ್ಷಿತ ಸಮರದಲ್ಲಿ ನಮ್ಮ ವೈದ್ಯರು ಮತ್ತು ನರ್ಸ್ಗಳು ಆಧುನಿಕ ಹೀರೋಗಳಾಗಿದ್ದಾರೆ. ಸದ್ಯೋಭವಿಷ್ಯದಲ್ಲಿ ಅವರಿಗೆ ಬೇರೆ ಆಯ್ಕೆ ಇರುವುದಿಲ್ಲ. ಅಪಾಯಕಾರಿ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ಅನುಸರಿಸುತ್ತಿರುವ ನಿಯಮಗಳನ್ನೇ ಅವರೂ ಪಾಲಿಸಬೇಕಾಗುತ್ತದೆ” ಎಂದಿರುವ ವರದಿಯು,ಈ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯಕೀಯ ವೃತ್ತಿಪರರೂ ಅಪಾಯದಿಂದ ಹೊರತಾಗಿಲ್ಲ. ಅವರ ಪೈಕಿ ಸುಮಾರು ಶೇ.20ರಷ್ಟು ಜನರು ಸೋಂಕು ಪೀಡಿತರಾಗಿದ್ದಾರೆ, ಕೆಲವರು ಸಾಯುತ್ತಲೂ ಇದ್ದಾರೆ ಎಂದು ತಿಳಿಸಿದೆ.