ಸಿಎಎ ವಿರೋಧಿ ಪ್ರತಿಭಟನೆ ವೇಳೆ ಸೊತ್ತುಹಾನಿ: 21.67 ಲಕ್ಷ ರೂ. ಪಾವತಿಸಲು 13 ಮಂದಿಗೆ ನೋಟಿಸ್
ಇಲ್ಲದಿದ್ದಲ್ಲಿ ಜೈಲುವಾಸ ಅನುಭವಿಸಲು ಸೂಚನೆ
ಫೈಲ್ ಚಿತ್ರ
ಹೊಸದಿಲ್ಲಿ,ಮಾ.25: ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ನಡೆದ ಸಂದರ್ಭ ಭುಗಿಲೆದ್ದ ಹಿಂಸಾಚಾರದಲ್ಲಿ ಸಂಭವಿಸಿದ ಸೊತ್ತುಹಾನಿಗಾಗಿ ಪರಿಹಾರ ನೀಡುವಂತೆ ಲಕ್ನೋ ನಗರಾಡಳಿತವು 13 ಮಂದಿಗೆ ನೋಟಿಸ್ ಜಾರಿಗೊಳಿಸಿದೆ. ಸೊತ್ತುಗಳ ಹಾನಿಗಾಗಿ 21.67 ಲಕ್ಷ ರೂ. ಹಾಗೂ ಮೊತ್ತದ ಶೇ.10ರಷ್ಟು ಹೆಚ್ಚುವರಿ ಹಣವನ್ನು ಪಾವತಿಸುವಂತೆ ಇಲ್ಲವೇ ಜೈಲು ಶಿಕ್ಷೆಯನ್ನು ಎದುರಿಸುವಂತೆ ಅವರಿಗೆ ಸೂಚಿಸಲಾಗಿದೆ.
ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಲಕ್ನೋ ನಗರದ ಹಸನ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ 21.67 ಲಕ್ಷ ರೂ. ಪಾವತಿಸುವಂತೆ ಈ 13 ಮಂದಿಗೆ ಸೂಚಿಸಲಾಗಿತ್ತು.
ಡಿಸೆಂಬರ್ 19ರಂದು ನಡೆದ ಪ್ರತಿಭಟನೆಯ ವೇಳೆ ಸೊತ್ತು ಹಾಗೂ ಆಸ್ತಿಗಳ ನಷ್ಟಕ್ಕಾಗಿ ಆರೋಪಿಗಳಿಂದ 1.55 ಕೋಟಿ ರೂ. ಹಣವನ್ನು ವಸೂಲು ಮಾಡಲು ಲಕ್ನೋದ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ 57 ಮಂದಿಗೆ ನೋಟಿಸ್ ನೀಡಲಾಗಿತ್ತು. ಇವರು 30 ದಿನಗಳೊಳಗೆ ಈ ಮೊತ್ತವನ್ನು ಪಾವತಿಸಬೇಕು ಇಲ್ಲದಿದ್ದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುವುದೆಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು.
ಸಿಎಎ ವಿರೋಧಿ ಪ್ರತಿಭಟನಕಾರರ ಛಾಯಾಚಿತ್ರಗಳನ್ನು, ಹೆಸರುಗಳು ಹಾಗೂ ವಿಳಾಸಗಳನ್ನು ಬಹಿರಂಗವಾಗಿ ನಾಮಫಲಕಗಳಲ್ಲಿ ಪ್ರದರ್ಶಿಸುವ ಆದಿತ್ಯನಾಥ್ ಸರಕಾರದ ನಡೆಯನ್ನು ಅಲಹಾಬಾದ್ ಹೈಕೋರ್ಟ್ ಕಟುವಾಗಿ ಟೀಕಿಸಿತ್ತು. ಆನಂತರ ಉ.ಪ್ರ. ಸರಕಾರವು ಈ ವಿಷಯವನ್ನು ವಿಸ್ತೃತ ಪೀಠದ ಪ್ರಸ್ತಾವನೆಗೆ ಸಲ್ಲಿಸಿತ್ತು. ಗೂಂಡಾಗಿರಿ, ಸೊತ್ತು ನಾಶ ಪ್ರಕರಣಗಳಲ್ಲಿ ಆರೋಪಿಗಳಿಂದ ಪರಿಹಾರ ಸಂಗ್ರಹಿಸುವುದಕ್ಕಾಗಿ ನೂತನ ದಾವೆಗಳ ನ್ಯಾಯಾಧೀಕರಣಕ್ಕೆ ವ್ಯಾಪಕ ಅಧಿಕಾರವನ್ನು ನೀಡುವ ಆಧ್ಯಾದೇಶವನ್ನು ಕೂಡಾ ಉ.ಪ್ರ. ಸರಕಾರ ಅಂಗೀಕರಿಸಿದೆ.
ನಾಶವಾದ ಸೊತ್ತುಗಳ ಮೌಲ್ಯದ ಜೊತೆಗೆ ಹೆಚ್ಚುವರಿಯಾಗಿ ಅಸಲಿ ಮೊತ್ತದ ಶೇ.10ರಷ್ಟು ಹಣವನ್ನು ಸಂಗ್ರಹಿಸುವುದಕ್ಕೂ ಅವಕಾಶವಿದೆಯೆಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಒಂದು ವೇಳೆ 13 ಜನರು ಒಂದು ವಾರದೊಳಗೆ ನಷ್ಟ ಪರಿಹಾರದ ಮೊತ್ತವನ್ನು ಪಾವತಿಸದೆ ಇದ್ದಲ್ಲಿ ಅವರು ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಹಾಗೂ ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.