ಆಸ್ತಿ ನಷ್ಟ ವಸೂಲಿ ವಿರುದ್ಧ ಅರ್ಜಿಗೆ ಸಂಬಂಧಿಸಿ ಉ.ಪ್ರದೇಶ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಸಿಎಎ ವಿರೋಧಿ ಪ್ರತಿಭಟನೆ
ಲಕ್ನೋ,ಮಾ.19: ಆದಿತ್ಯನಾಥ್ ಸರಕಾರವು ಮಾ.13ರಂದು ಅಂಗೀಕರಿಸಿರುವ ಉತ್ತರ ಪ್ರದೇಶ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟ ವಸೂಲಿ ಅಧ್ಯಾದೇಶ, 2020ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಗುರುವಾರ ರಾಜ್ಯ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ.
ಅಧ್ಯಾದೇಶವು ಸಂವಿಧಾನದ ಭಾಗ-3ರಡಿ ಮೂಲಭೂತ ಹಕ್ಕುಗಳಿಗೆ ಅನುಗುಣವಾಗಿಲ್ಲ,ಹೀಗಾಗಿ ಅದು ರದ್ದುಗೊಳ್ಳಲು ಅರ್ಹವಾಗಿದೆ ಎಂದು ಅರ್ಜಿದಾರ ಶಶಾಂಕ ಶ್ರೀತ್ರಿಪಾಠಿ ಅವರು ವಾದಿಸಿದರು.
ಮಾ.25ರೊಳಗೆ ನೋಟಿಸಿಗೆ ಉತ್ತರಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶ ನೀಡಿದ ನ್ಯಾಯಮೂರ್ತಿಗಳಾದ ಗೋವಿಂದ ಮಾಥೂರ್ ಮತ್ತು ಸಮಿತ್ ಗೋಪಾಲ ಅವರ ಪೀಠವು,ಮುಂದಿನ ವಿಚಾರಣೆಯನ್ನು ಮಾ.27ಕ್ಕೆ ನಿಗದಿಗೊಳಿಸಿತು.
ಆದೇಶ ಹೊರಡಿಸುವ ಸಂದರ್ಭ ಪೀಠವು,ಅಧ್ಯಾಧೇಶವು ನಿರಂಕುಶ ಸ್ವರೂಪದ್ದಾಗಿದೆ ಎಂದು ಬಣ್ಣಿಸಿತು.
ತನ್ಮಧ್ಯೆ ಕೊರೋನವೈರಸ್ ಸೋಂಕಿನ ಭೀತಿಯ ನಡುವೆ ಬುಧವಾರ ಉಚ್ಚ ನ್ಯಾಯಾಲಯವು,ಕಾನೂನು ಪರಿಹಾರವನ್ನು ಕೋರಿ ಜನರು ನ್ಯಾಯಾಲಯದ ಮೆಟ್ಟಿಲನ್ನೇರುವುದನ್ನು ಅನಿವಾರ್ಯವಾಗಿಸುವ ಯಾವುದೇ ಬಲವಂತದ ಕ್ರಮವನ್ನು ಯಾವುದೇ ವ್ಯಕ್ತಿಯ ವಿರುದ್ಧ ಕೈಗೊಳ್ಳದಂತೆ ಸರಕಾರಕ್ಕೆ ಸೂಚಿಸಿತ್ತು. ಎ.6ರವರೆಗೆ ಎರಡು ವಾರಗಳ ಕಾಲ ತನ್ನ ಆದೇಶವನ್ನ್ನು ಪಾಲಿಸುವಂತೆ ಅದು ರಾಜ್ಯ ಆಡಳಿತಕ್ಕೆ ನಿರ್ದೇಶ ನೀಡಿದೆ.