"ನಾನು ಲಾಕ್ ಡೌನ್ ಉಲ್ಲಂಘಿಸಿದ್ದೇನೆ, ನನ್ನಿಂದ ದೂರವಿರಿ" ಎಂದು ಕಾರ್ಮಿಕನ ಹಣೆಗೆ ಬರೆದ ಪೊಲೀಸ್ ಅಧಿಕಾರಿ !
ವಲಸಿಗ ಕಾರ್ಮಿಕರ ಸಂಕಟಕ್ಕೆ ಮರುಗಿದ ದೇಶ
ಕೊರೋನ ನಿಯಂತ್ರಣಕ್ಕಾಗಿ ದೇಶಾದ್ಯಂತ ಘೋಷಿಸಿರುವ ಲಾಕ್ ಡೌನ್ ನಿಂದ ಕಂಗೆಟ್ಟು ಮನೆಗೆ ಕಾಲ್ನಡಿಗೆಯಲ್ಲೇ ಹೊರಟಿರುವ ವಲಸಿಗ ಕಾರ್ಮಿಕರ ಮೇಲೆ ಅಲ್ಲಲ್ಲಿ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ಪ್ರಕರಣಗಳ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ಮಧ್ಯಪ್ರದೇಶ ಪೊಲೀಸ್ ಅಧಿಕಾರಿಯೊಬ್ಬರು ವಲಸಿಗ ಕಾರ್ಮಿಕನೊಬ್ಬನ ಹಣೆಯಲ್ಲಿ " ನಾನು ಲಾಕ್ ಡೌನ್ ಉಲ್ಲಂಘಿಸಿದ್ದೇನೆ, ನನ್ನಿಂದ ದೂರವಿರಿ" ಎಂದು ಬರೆದಿರುವ ಅಮಾನವೀಯ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದಿಂದ ರಾಜ್ಯಕ್ಕೆ ಮರಳಿದ ಮೂವರು ಕಾರ್ಮಿಕರನ್ನು ಸ್ಥಳೀಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೋಗುವಂತೆ ಪೊಲೀಸರು ಹೇಳಿದ್ದರು. ಹಾಗೆ ವೈದ್ಯರನ್ನು ಕಾಯುತ್ತಾ ಕುಳಿತಿದ್ದ ಈ ಕಾರ್ಮಿಕರ ಮೇಲೆ ಹಿರಿಯ ಇನ್ಸ್ ಪೆಕ್ಟರ್ ಒಬ್ಬರು ಹರಿಹಾಯ್ದು ಅವರ ಹಣೆಯ ಮೇಲೆ ಹೀಗೆ ಬರೆದಿದ್ದಾರೆ. ಇಲ್ಲಿನ ಛತ್ತರ್ಪುರ್ ಜಿಲ್ಲೆಯ ಗೌರಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಛತ್ತರ್ಪುರ್ ಎಸ್ಪಿ ಕುಮಾರ್ ಸೌರಭ್ ಅವರು ಪೊಲೀಸರು ಜನರೊಂದಿಗೆ ಹೀಗೆ ವ್ಯವಹರಿಸಬಾರದು ಎಂದು ಸೂಚಿಸಲಾಗಿದೆ. ಆ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಲಕ್ಷಾಂತರ ಕಾರ್ಮಿಕರು ಹೀಗೆ ಪಟ್ಟಣಗಳಿಂದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ತೆರಳುತ್ತಿರುವ ಹಾಗು ಈ ಸಂದರ್ಭದಲ್ಲಿ ಅವರು ಎದುರಿಸುತ್ತಿರುವ ಸಂಕಟಗಳು ಹಾಗು ಸವಾಲುಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವೆಡೆ ಈ ವಲಸಿಗರೊಂದಿಗೆ ಪೊಲೀಸರು ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿರುವ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವೇ ಕೆಲವೆಡೆ ಪೊಲೀಸರು ಇಂತಹ ವಲಸಿಗರಿಗೆ ನೆರವಾಗುತ್ತಿರುವ ನಿದರ್ಶನಗಳೂ ಕಂಡು ಬಂದಿವೆ.
संवेदनहीन शिवराज सरकार:
— MP Congress (@INCMP) March 29, 2020
छतरपुर अपने घर वापस लौट रहे मजदूर के माथे पर मध्यप्रदेश पुलिस ने लिख दिया लॉकडाउन का उलंघन किया, मुझसे दूर रहना।
शिवराज ने जनता को दो ही विकल्प दिये हैं, या तो कोरोना से मरो या फिर भूख से।
शिवराज जी,
आपने मज़दूर के नहीं, भारत माता के माथे पर लिखा है। pic.twitter.com/msg7zSOPPO