ಲಾಕ್ ಡೌನ್: ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಗರ್ಭಿಣಿಯನ್ನು ಹಿಂದಕ್ಕೆ ಕಳುಹಿಸಿದ ಪೊಲೀಸರು
ಹೊಸದಿಲ್ಲಿ, ಮಾ.28: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಲಸೆ ಕಾರ್ಮಿಕೆ 9 ತಿಂಗಳ ಗರ್ಭಿಣಿ ಗಣೇಶಿ ಲಾಕ್ಡೌನ್ ಕಾರಣದಿಂದಾಗಿ ಕಾಲ್ನಡಿಗೆಯಲ್ಲಿ ಊರಿನ ಕಡೆಗೆ ಸಾಗುತ್ತಿದ್ದಾಗ ಪೊಲೀಸರು ಆಕೆಯನ್ನು ತಡೆದು ನಿಲ್ಲಿಸಿ ಹಿಂದಕ್ಕೆ ಕಳುಹಿಸಿರುವ ಘಟನೆ ವರದಿಯಾಗಿದೆ.
ರಾಜಧಾನಿಯ ಆನಂದ್ ವಿಹಾರ್ ಬಸ್ ಟರ್ಮಿನಲ್ ಮೂಲಕ ಹೋಗುವಾಗ ಪೊಲೀಸರು ಆಕೆಯನ್ನು ತಡೆದರು. ಅಷ್ಟರ ವೇಳೆಗೆ ಆಕೆ ಇತರರೊಂದಿಗೆ ಐದು ಕಿಲೋಮೀಟರ್ ದೂರ ನಡೆದುಕೊಂಡು ಬಂದಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ನ್ನು ಘೋಷಿಸಿದ ಕಾರಣದಿಂದಾಗಿ ದೇಶಾದ್ಯಂತ ವಲಸೆ ಕಾರ್ಮಿಕರು ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ. ಅನಿಶ್ಚಿತತೆಯ ಮಧ್ಯೆ ಗಣೇಶಿ ಎಂಬ ಗರ್ಭಿಣಿ ಉದ್ಯೋಗ ಮತ್ತು ಹಣವಿಲ್ಲದೆ ಸ್ವಂತ ಊರಿನ ಕಡೆಗೆ ಹೆಜ್ಜೆ ಹಾಕಿದ್ದರು.
“ಕೆಲಸವಿಲ್ಲದ ಕಾರಣ ನಾವು ಈಗ ಏನು ಮಾಡಲು ಸಾಧ್ಯ ?, ನನ್ನ ಸೊಸೆ ಒಂಬತ್ತು ತಿಂಗಳ ಗರ್ಭಿಣಿ. ಅವಳಿಗೆ ಏನಾದರೂ ಸಂಭವಿಸಿದಲ್ಲಿ ನಾವು ಏನು ಮಾಡುವುದು? ನಾವು ಝಾನ್ಸಿ ಬಳಿಯ ಮಹೋಬಾಗೆ ಹೋಗಲು ಬಯಸುತ್ತೇವೆ. ಅದು ನಮ್ಮ ಊರು” ಎಂದು ಗಣೇಶಿ ಅತ್ತೆ ಖಾಸಗಿ ವಹನಿಯೊಂದಕ್ಕೆ ತಿಳಿಸಿದರು.
“ನಮಗೆ ಬಾಡಿಗೆ ಪಾವತಿಸಲು ಹಣವಿಲ್ಲ ಮತ್ತು ತಿನ್ನಲು ಏನೂ ಇಲ್ಲ. ನಾವು ಏನು ಮಾಡುವುದು” ಅವರು ಹೇಳಿದರು.
ಗಣೇಶಿ ಮತ್ತು ಅವಳ ಅತ್ತೆ ಸೇರಿದಂತೆ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ದಿಲ್ಲಿಯಲ್ಲಿ ನೆಲೆಸಿದ್ದಾರೆ . ಅವರು ಇನ್ನೂ 30 ಕಿಲೋಮೀಟರ್ ದೂರ ಸಾಗಬೇಕಿತ್ತು. ಆದರೆ ಲಾಕ್ಡೌನ್ನಿಂದಾಗಿ ಅಂತರ್ರಾಜ್ಯ ಗಡಿಗಳನ್ನು ಮುಚ್ಚಲಾಗಿರುವುದರಿಂದ ಅವರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.