ಲಾಕ್ಡೌನ್ ಸಂದರ್ಭ ಪೊಲೀಸರ ಮೇಲೆ ಹಲ್ಲೆ ನಡೆಸಿದರೆ ಎನ್ಎಸ್ಎ ಪ್ರಕರಣ ದಾಖಲು: ಆದಿತ್ಯನಾಥ್
ಲಕ್ನೊ, ಎ.3: ಕೊರೊನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಲಾಕ್ಡೌನ್ ಸಂದರ್ಭ ಪೊಲೀಸರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ)ಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ.
ಲಾಕ್ಡೌನ್ ಸಂದರ್ಭ ಕರ್ತವ್ಯ ನಿರ್ವಹಿಸುವ ಪೊಲೀಸರ ಮೇಲೆ ಹಲ್ಲೆ ನಡೆದ ಹಲವು ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಾಕ್ಡೌನ್ ಬಗ್ಗೆ ನಿರ್ಲಕ್ಷ ತೋರುವುದಲ್ಲದೆ ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ಹಲ್ಲೆಯನ್ನೂ ನಡೆಸುವ ಪ್ರಕರಣ ಮರುಕಳಿಸಬಾರದು ಎಂದು ರಾಜ್ಯದ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಲಾಕ್ಡೌನ್ ಸಂದರ್ಭ ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ಹಲ್ಲೆ ನಡೆದಿರುವ ಹಲವು ಪ್ರಕರಣಗಳು ಉತ್ತರಪ್ರದೇಶದಲ್ಲಿ ನಡೆದಿವೆ. ಎಪ್ರಿಲ್ 1ರಂದು ಮುಝಫ್ಫರ್ನಗರದಲ್ಲಿ ರಸ್ತೆ ಬದಿ ಗುಂಪು ಸೇರಿದ್ದ ಜನರನ್ನು ಚದುರಿಸಲು ಮುಂದಾದ ಪೊಲೀಸರ ಮೇಲೆಯೇ ಗುಂಪಿನಲ್ಲಿದ್ದವರು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದು ಪೊಲೀಸ್ ಅಧಿಕಾರಿ ಹಾಗೂ ಕಾನ್ಸ್ಟೇಬಲ್ ಗಂಭೀರ ಗಾಯಗೊಂಡಿದ್ದರು.