ತನಿಖಾಕಾರರಿಗೆ ಬೆದರಿಕೆಯೊಡ್ಡುತ್ತಿರುವ ಅರ್ನಬ್ ಗೋಸ್ವಾಮಿ: ಸುಪ್ರೀಂ ಕದ ತಟ್ಟಿದ ಮಹಾರಾಷ್ಟ್ರ ಸರಕಾರದ ಆರೋಪ
ಮುಂಬೈ: ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಭಯದ ಮನಸ್ಥಿತಿ ಸೃಷ್ಟಿಸಿ ತನಿಖಾಕಾರರಿಗೆ ಬೆದರಿಕೆಯೊಡ್ಡುತ್ತಿದ್ದಾರೆಂದು ಆರೋಪಿಸಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ಪಾಲ್ಘರ್ ಗುಂಪು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತಂತೆ ನಿಂದನಾತ್ಮಕವಾಗಿ ತಮ್ಮ ಎಪ್ರಿಲ್ 21ರ ಟಿವಿ ಶೋನಲ್ಲಿ ಮಾತನಾಡಿದ್ದ ಆರೋಪದಲ್ಲಿ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಸುಪ್ರೀಂ ಕೋರ್ಟ್ ಮುಂದೆ ಅಪೀಲು ಸಲ್ಲಿಸಿದ ಮಹಾರಾಷ್ಟ್ರ ಸರಕಾರ ತನಿಖಾ ಏಜನ್ಸಿಗೆ ಯಾವುದೇ ಒತ್ತಡ, ಬೆದರಿಕೆ ಹಾಗೂ ಬಲವಂತದಿಂದ ರಕ್ಷಣೆಯೊದಗಿಸುವಂತೆ, ತನಿಖೆಯನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾವಾಗಿ ನಡೆಸುವಂತೆ ನೋಡಿಕೊಳ್ಳಬೇಕೆಂದು ಹಾಗೂ ನ್ಯಾಯಾಲಯದಿಂದ ಬಂಧನದಿಂದ ವಿನಾಯಿತಿ ಪಡೆದ ಗೋಸ್ವಾಮಿ ಅದನ್ನು ದುರುಪಯೋಗ ಪಡಿಸದಂತೆ ನೋಡಿಕೊಳ್ಳುವಂತೆ ಕೋರಿತ್ತು.
ತಮ್ಮ ಹುದ್ದೆ ಹಾಗೂ ಚಾನೆಲ್ ಅನ್ನು ಅಸಮರ್ಥನೀಯ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಲು ಅವರು ಬಳಸುತ್ತಿದ್ದಾರೆಂದೂ ಅಪೀಲಿನಲ್ಲಿ ತಿಳಿಸಲಾಗಿತ್ತು.