ಪ್ರಧಾನಿಯ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವುದು ಸಮಯವ್ಯರ್ಥ ಎಂದು ಕೇರಳ ಸಿಎಂ ಭಾವಿಸುತ್ತಾರೆ
ಬಿಜೆಪಿಗೆ ಶಿವಸೇನೆ ತಿರುಗೇಟು
ಮುಂಬೈ,ಮೇ 22: ಕೊರೋನವೈರಸ್ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಸರಕಾರದ ವಿರುದ್ಧ ವಿಪಕ್ಷ ಬಿಜೆಪಿಯ ಪ್ರತಿಭಟನೆಯು ದುಬಾರಿಯಾಗಲಿದೆ ಎಂದು ಆಡಳಿತರೂಢ ಶಿವಸೇನೆ ಇಂದು ಹೇಳಿದೆ.
ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬರದಿರುವ ಸಂಪಾದಕೀಯದಲ್ಲಿ ಮಹಾರಾಷ್ಟ್ರದ ಮಹಾವಿಕಾಸ್ ಅಘಾಡಿ ಸರಕಾರವು ಕೊರೋನ ವೈರಸ್ನ್ನು ನಿಭಾಯಿಸಿರುವುದಕ್ಕೆ ಸಂಬಂಧಿಸಿ ಕೇರಳ ಮಾದರಿಯನ್ನು ಪ್ರಸ್ತಾವಿಸಿದ ವಿಪಕ್ಷ ನಾಯಕ ಚಂದ್ರಕಾಂತ್ ಪಾಟೀಲ್ರನ್ನು ತರಾಟೆಗೆ ತೆಗೆದುಕೊಂಡಿದೆ.
"ಪಾಟೀಲ್ ಅವರು ಕೇರಳ ಮಾದರಿಯನ್ನು ಅಧ್ಯಯನ ನಡೆಸಿದಂತೆ ಕಾಣುತ್ತಿಲ್ಲ. ಕೇರಳ ಸಿಎಂ ಪಿಣರಾಯಿ ವಿಜಯನ್ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಪಾಲಿಸಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವೀಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವುದು ಸಮಯ ವ್ಯರ್ಥ ಎಂದು ಅವರು ಭಾವಿಸುತ್ತಾರೆ'' ಎಂದು ಸಂಪಾದಕೀಯದಲ್ಲಿ ಬರೆದಿದೆ.
ಚಂದ್ರಕಾಂತ್ ಪಾಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದಲ್ಲಿ ಪ್ರತಿಭಟಿಸುವ ಬದಲಿಗೆ ಕೇರಳದಲ್ಲಿ ಪ್ರತಿಭಟಿಸಬೇಕಾಗಿತ್ತು ಎಂದು ಬಿಜೆಪಿಯ ಇಬ್ಬರು ಹಿರಿಯ ನಾಯಕರನ್ನು ಮರಾಠಿ ದೈನಿಕ ಪತ್ರಿಕೆ ತರಾಟೆಗೆ ತೆಗೆದುಕೊಂಡಿದೆ.
ದೇಶದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಇದ್ದು,ಪ್ರಧಾನಮಂತ್ರಿ ನರೇಂದ್ರ ಮೋದಿ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದಾರೆ. ಒಂದು ವೇಳೆ ವಿಪಕ್ಷಗಳು ಸಲಹೆ ನೀಡಲು ಬಯಸಿದರೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಬೇಕು. ವಿಪಕ್ಷಗಳಿಗೆ ಹಾಗೆ ಮಾಡಲು ನಾಚಿಕೆಯಾಗುತ್ತಿದೆಯೇ ಅಥವಾ ಆತ್ಮವಿಶ್ವಾಸವನ್ನು ಕಳೆದುಕೊಂಡಿವೆಯೇ ಎಂದು 'ಸಾಮ್ನಾ' ಪತ್ರಿಕೆ ಪ್ರಶ್ನಿಸಿದೆ.
ಮಹಾರಾಷ್ಟ್ರದಲ್ಲಿ ಕೊರೋನ ಪ್ರಕರಣ ಏರಿಕೆಯಾಗುತ್ತಿದ್ದರೂ ಹೆಚ್ಚಿನ ರೋಗಿಗಳು ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. 10,000 ರೋಗಿಗಳು ಗುಣಮುಖರಾಗಿದ್ದು ಇದು ಯಾವುದರ ಸೂಚನೆ?ಎಂದು ಸಂಪಾದಕೀಯದಲ್ಲಿಪ್ರಶ್ನಿಸಲಾಗಿದೆ.