ಚೀನಾ ಸೈನಿಕರಿಂದ ಭಾರತ ಯೋಧರ ಬಂಧನ ವರದಿ ನಿರಾಕರಿಸಿದ ಭಾರತೀಯ ಸೇನೆ
ಹೊಸದಿಲ್ಲಿ, ಮೆ 24: ಲಡಾಖ್ನಲ್ಲಿ ಚೀನಾ ಸೇನಾ ಪಡೆಗಳು ಭಾರತ ಯೋಧರನ್ನು ಬಂಧಿಸಿ,ಬಿಡುಗಡೆಗೊಳಿಸಿವೆೆ ಎಂಬ ವರದಿಯನ್ನು ಭಾರತೀಯ ಸೇನೆ ರವಿವಾರ ಬಲವಾಗಿ ತಿರಸ್ಕರಿಸಿದ್ದು, ಇಂತಹ ಆಧಾರವಿಲ್ಲದ ವರದಿಗಳು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ಹೇಳಿದೆ.
‘‘ಗಡಿಗಳಲ್ಲಿ ಭಾರತೀಯ ಸೈನಿಕರನ್ನು ಬಂಧಿಸಲಾಗಿಲ್ಲ. ನಾವಿದನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಮಾಧ್ಯಮಗಳು ಇಂತಹ ಆಧಾರವಿಲ್ಲದ ಸುದ್ದಿಗಳನ್ನು ಪ್ರಕಟಿಸಿದರೆ ಇದು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತದೆ’’ಎಂದು ಸೇನೆಯು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಲಡಾಖ್ನ ಚೀನಾದ ಗಡಿಯಲ್ಲಿ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚುಸುತ್ತಿರುವ ನಡುವೆ ಭಾರತೀಯ ಸೇನೆಯಿಂದ ಈ ಹೇಳಿಕೆ ಬಂದಿದೆ.
ಬಗೆಹರಿಸಲಾಗದ ಗಡಿಯಲ್ಲಿ ನಾಲ್ಕರಿಂದ ಐದು ಎತ್ತರದ ಸ್ಥಳಗಳಲ್ಲಿ ಚೀನಾ ತನ್ನ ಆಕ್ರಮಣಕಾರಿ ನಡವಳಿಕೆಯನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪೂರ್ವ ಲಡಾಖ್ನಲ್ಲಿ ಹೆಚ್ಚುವರಿ ಸೇನೆಯನ್ನು ಸ್ಥಳಾಂತರಿಸಿದೆ.
ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಶುಕ್ರವಾರ ಲಡಾಖ್ಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ವಿವರ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.