ಅಜಾಗರೂಕ ವರ್ತನೆಯಿಂದ ಕೋವಿಡ್-19 ಸೋಂಕು ತಗಲಿತ್ತು: ಮಹಾರಾಷ್ಟ್ರ ಸಚಿವ ಜಿತೇಂದ್ರ
ಮುಂಬೈ,ಮೇ 28: ಅಜಾಗರೂಕ ವರ್ತನೆಯಿಂದ ನನಗೆ ಕೊರೋನ ವೈರಸ್ ಸೋಕು ತಗಲಿತ್ತು ಎಂದು ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವಾದ್ ಹೇಳಿದ್ದಾರೆ.
ಈ ತಿಂಗಳಾರಂಭದಲ್ಲಿ ಕೆಲವು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದ ಜಿತೇಂದ್ರ ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಎರಡು ದಿನಗಳ ಕಾಲ ನಾನು ವೆಂಟಿಲೇಟರ್ ಸಪೋರ್ಟ್ನಲ್ಲಿದ್ದೆ ಎಂದು ಜಿತೇಂದ್ರ ಹೇಳಿದ್ದಾರೆ.
"ನಾನು ಅಜಾಗರೂಕತೆಯಿಂದ ವರ್ತಿಸಿದ್ದ ಕಾರಣ ಕೋವಿಡ್-19 ಸೋಂಕು ತಗಲಿತ್ತು. ನಾನು ಜನರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕೊರೋನ ವೈರಸ್ ಬಲೆಗೆ ಬಿದ್ದೆ'' ಎಂದು ಬಿಡಿಎ ಆಯೋಜಿಸಿದ್ದ ಆನ್ಲೈನ್ ಸಂವಾದದಲ್ಲಿ ಎನ್ಸಿಪಿ ನಾಯಕ ಹೇಳಿದ್ದಾರೆ.
ಕೊರೋನ ವೈರಸ್ ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಥಾಣೆಯ ಉಸ್ತುವಾರಿ ಸಚಿವರಾಗಿದ್ದ ಜಿತೇಂದ್ರ ಪರಿಹಾರ ಕಾರ್ಯದಲ್ಲಿ ಹೆಚ್ಚು ಸಕ್ರಿಯರಾಗಿದ್ದರು.
"ನನಗೆ ಇಚ್ಛಾಶಕ್ತಿ ಇದ್ದ ಕಾರಣ ಕಠಿಣ ಪರಿಸ್ಥಿತಿಯಿಂದ ಎರಡು ವಾರಗಳಲ್ಲಿ ಚೇತರಿಸಿಕೊಂಡಿದ್ದೇನೆ. ಅದೃಷ್ಟವಶಾತ್ ನಾನು ಬೇಗನೆ ಚೇತರಿಸಿಕೊಂಡಿದ್ದೇನೆ'' ಎಂದು ಜಿತೇಂದ್ರ ಅವಾದ್ ಹೇಳಿದ್ದಾರೆ.